ವಿಜಯ್ ಮತ್ತು ಸೇತುಪತಿ ಚಿತ್ರಕ್ಕೆ ಸಹಕರಿಸಿದ ಬುದ್ಧಿವಂತ-೨

Picture of Cinibuzz

Cinibuzz

Bureau Report

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಬುದ್ಧಿವಂತ-೨ ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ನೆರವೇರುತ್ತಿದೆ. ಸತತ ೧೩ ದಿನಗಳ ಕಾಲ ಶಿವಮೊಗ್ಗ ಕಾರಾಗೃಹದಲ್ಲಿ ಶೂಟಿಂಗ್ ಮುಗಿಸಿ ಚಿತ್ರತಂಡ ವಾಪಾಸಾಗಿದೆ. ಎಂ. ಜಯರಾಮ್ ನಿರ್ದೇಶನದ ಈ ಚಿತ್ರವನ್ನು ಕ್ರಿಸ್ಟಲ್ ಪಾರ್ಕ್ ಸಿನೆಮಾಸ್ನ ಟಿ.ಆರ್. ಚಂದ್ರಶೇಖರ್ ನಿರ್ಮಿಸುತ್ತಿದ್ದಾರೆ. ಸದ್ಯ ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಲ್ಲಿ ಕ್ರಿಸ್ಟಲ್ ಪಾರ್ಕ್ ಮುಂಚೂಣಿಯಲ್ಲಿದೆ. ಈ ಸಂಸ್ಥೆಯಿಂದ ಬರುತ್ತಿರುವ ಎಲ್ಲ ಚಿತ್ರಗಳೂ ಉತ್ತಮ ವ್ಯಾಪಾರ, ವಹಿವಾಟು ನಡೆಸುತ್ತಿವೆ. ಬಹುಶಃ ಕ್ರಿಸ್ಟಲ್ ಪಾರ್ಕ್ ಸೆನೆಮಾಸ್ನ ಈ ಹಿಂದಿನ ಎಲ್ಲ ಚಿತ್ರಗಳನ್ನೂ ಮೀರಿಸುವ ದೊಡ್ಡ ಬಜೆಟ್ಟಿನಲ್ಲಿ ಮೂಡಿಬರುತ್ತಿರುವ ಸಿನಿಮಾ ಬುದ್ಧಿವಂತ-೨.

ಶಿವಮೊಗ್ಗ ಜೈಲಿನಲ್ಲಿ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಒಂದಿಷ್ಟು ಬಣ್ಣಮಾಡಿಸಿ ಚಿತ್ರಕ್ಕೆ ಬೇಕಿದ್ದ ಸಣ್ಣ ಪುಟ್ಟ ಬದಲಾವಣೆ ಮಾಡಿಕೊಳ್ಳಲಾಗಿತ್ತು. ಮೊನ್ನೆ ದಿನ ಚಿತ್ರೀಕರಣ ಮುಗಿಸಿ ಪ್ಯಾಕಪ್ ಮಾಡುವ ಹೊತ್ತಿಗೆ ತಮಿಳಿನ ವಿಜಯ್-೬೪ ಚಿತ್ರದ ಪ್ರೊಡಕ್ಷನ್ ಮ್ಯಾನೇಜರ್ ಬಂದು ‘ಐದನೇ ತಾರೀಖಿಂತ ನಮ್ಮ ಸಿನಿಮಾ ಶೂಟ್ ಮಾಡ್ತಿದ್ದೀವಿ. ಏನೂ ಅಭ್ಯಂತರವಿಲ್ಲ ಅಂದರೆ ನೀವು ಸೃಷ್ಟಿಸಿರುವ ಸೆಟ್ಟನ್ನು ಹಾಗೇ ಬಿಡಲು ಸಾಧ್ಯವಾ? ಎಂದು ಕೇಳಿದ್ದರು. ಟಿ.ಆರ್. ಚಂದ್ರಶೇಖರ್ ತುಂಬಾ ಖುಷಿಯಿಂದ ಒಪ್ಪಿಕೊಂಡು, ಆತ್ಮೀಯವಾಗಿ ಮಾತಾಡಿ ನಾವು ಬಳಸಿದ್ದೇವೆ. ನಿಮಗೂ ಅದು ಬಳಕೆಯಾಗುತ್ತದೆಂದರೆ ಅದಕ್ಕಿಂತಾ ಸಮಾಧಾನದ ವಿಚಾರ ಬೇರೇನಿದೆ ಎಂದಿದ್ದಾರೆ. ಹೀಗಾಗಿ ಇದೇ ವಾರ ಐದನೇ ತಾರೀಖಿಂತ ತಮಿಳು ಚಿತ್ರದ ಶೂಟಿಂಗು ಶಿವಮೊಗ್ಗ ಜೈಲಿನಲ್ಲಿ ಆರಂಭವಾಗಲಿದೆ.

ಲೋಕೇಶ್ ಕನಕರಾಜ್ ನಿರ್ದೇಶನದ ಇನ್ನೂ ಹೆಸರಿಡದ (ವಿಜಯ್ ೬೪) ಚಿತ್ರದಲ್ಲಿ ತಮಿಳಿನ ಇಬ್ಬರು ಸೂಪರ್ ಸ್ಟಾರ್ ಗಳಾದ ವಿಜಯ್ ಮತ್ತು ವಿಜಯ್ ಸೇತುಪತಿ ಒಟ್ಟಿಗೇ ನಟಿಸುತ್ತಿದ್ದಾರೆ. ವಿಜಯ್ ಹೀರೋ ಆದರೆ ಸೇತುಪತಿ ವಿಲನ್ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ ಎಂಬ ಮಾಹಿತಿಯಿದೆ. ತಮಿಳು ಮತ್ತು ಕನ್ನಡ ಚಿತ್ರರಂಗಕ್ಕೆ ಮೊದಲಿನಿಂದಲೂ ನಂಟು. ಆ ಕಾಲದಲ್ಲಿ ಕನ್ನಡ ಸಿನಿಮಾಗಳು ಚಿತ್ರೀಕರಣಗೊಳ್ಳುತ್ತಿದ್ದದ್ದೇ ಮದ್ರಾಸಿನಲ್ಲಿ. ಈಗ ರಜನಿಕಾಂತ್ ಸೇರಿದಂತೆ ತಮಿಳಿನ ಸ್ಟಾರ್ ಸಿನಿಮಾಗಳು ಬಹುತೇಕ ಶೂಟಿಂಗ್ ನಡೆಸೋದು ಮೈಸೂರು, ಬೆಂಗಳೂರು ಮುಂತಾದೆಡೆಗಳಲ್ಲಿ. ಸದ್ಯ ಇಂಡಿಯಾದ ಎಲ್ಲ ಕಾರಾಗೃಹಗಳಲ್ಲಿ ಚಿತ್ರೀಕರಣದ ಅನುಮತಿ ನೀಡುತ್ತಿಲ್ಲ. ಹೀಗಾಗಿ ಬಹುತೇಕ ಚಿತ್ರರಂಗ ಶಿವಮೊಗ್ಗ ಜೈಲನ್ನೇ ತಮ್ಮ ಸಿನಿಮಾಗಳ ಶೂಟಿಂಗಿಗಾಗಿ ಅವಲಂಬಿಸಿವೆ.

ರಿಯಲ್ ಸ್ಟಾರ್ ಅಭಿನಯದ ಬುದ್ಧಿವಂತ-೨ ತಂಡದ ದೊಡ್ಡ ಮನಸ್ಸಿನಿಂದ ತಮಿಳು ಸಿನಿಮಾವೊಂದು ಸಲೀಸಾಗಿ ಶೂಟಿಂಗ್ ಆರಂಭಿಸಲು ಸಹಕಾರಿಯಾಗಿರುವುದು ಸದ್ಯ ಎರಡೂ ರಾಜ್ಯಗಳ ನಡುವಿನ ಬಾಂಧವ್ಯಕ್ಕೆ ಕಾರಣವಾಗಿದೆ ಅನ್ನಬಹುದು!

ಇನ್ನಷ್ಟು ಓದಿರಿ

Scroll to Top