ಎಣ್ಣೆ ಸಿಗದೇ ಕಣ್ಣು ಮುಚ್ಚಿದವರಿಗಾಗಿ!

Picture of Cinibuzz

Cinibuzz

Bureau Report

ಯಾವುದೇ ವಿಚಾರವೊಂದರ ಕುರಿತಾಗಿ ತಕ್ಷಣಕ್ಕೆ ಸ್ಪಂದಿಸುವುದು, ಪ್ರತಿಕ್ರಿಯಿಸುವುದೂ ಒಂಥರಾ ಕಲೆಗಾರಿಕೆಯೇ. ನಟ, ನಿರ್ದೇಶಕ, ನಿರೂಪಕ, ಪತ್ರಕರ್ತ ಯತಿರಾಜ್ ಅನೇಕ ವಿಚಾರಗಳಲ್ಲಿ ಗಮನ ಸೆಳೆಯುತ್ತಿರುತ್ತಾರೆ.

ಸಿನಿಮಾ ಪತ್ರಿಕಾಗೋಷ್ಟಿ, ಸಮಾರಂಭಗಳ ವೇದಿಕೆಯಲ್ಲಿ ಹೊರಗಿನ ನಿರೂಪಕರು ಕಾಣಿಸಿಕೊಂಡರೇನೆ ಪತ್ರಕರ್ತರು ಸಿಡಿಸಿಡಿ ಎನ್ನುತ್ತಿರುತ್ತಾರೆ. ಅದೇ ಜಾಗದಲ್ಲಿ ಯತಿ ಇದ್ದರಷ್ಟೇ ಎಲ್ಲರ ಮುಖದಲ್ಲೂ ಸಮಾಧಾನ ಕಾಣುವುದು. ಸಿನಿಮಾ ಮಂದಿ ಹೆಚ್ಚು ಮಾತಾಡುತ್ತಿದ್ದಾರೆ ಅನ್ನಿಸುತ್ತಿದ್ದಂತೆಯೇ ಅವರ ಅರಿವಿಗೇ ಬಾರದಂತೆ ಅವರ ಮಾತಿಗೆ ಕತ್ತರಿ ಹಾಕುವುದು, ಏನೇನೂ ಮಾತಾಡುತ್ತಿಲ್ಲ ಅಂತಾ ಗೊತ್ತಾದಾಗ ತಕ್ಷಣವೇ ಅವರ ಮಾತನ್ನು ಮಾಹಿತಿ ನೀಡುವತ್ತ ತಿರುಗಿಸುವುದು, ಸಂದರ್ಭಕ್ಕೆ ತಕ್ಕ ತಮಾಷೆ, ಅಗತ್ಯ ವಿವರಗಳನ್ನೆಲ್ಲಾ ನೀಡುತ್ತಾ, ತಮ್ಮ ನಿರೂಪಣೆಯ ಮೂಲಕ ಇಡೀ ಸ್ಟೇಜಿಗೆ ಜೀವಕಳೆ ತಂದುಕೊಡೋದು ಯತಿ ರೀತಿ.

ಎರಡು ದಶಕಗಳಿಂದ ಸಿನಿಮಾ ಪತ್ರಕರ್ತರಾಗಿಯೂ ಗುರುತಿಸಿಕೊಂಡಿರುವ ಯತಿರಾಜ್ ಚೆಂದದ ನಟ ಕೂಡಾ. ಇವರನ್ನು ಸುದೀಪ್ ಅವರ ಬಹುತೇಕ ಚಿತ್ರಗಳಲ್ಲಿ ನೋಡಿರುತ್ತೀರಿ. ಶಿವರಾಜ್ ಕುಮಾರ್ ಅವರ ಆದಿತ್ಯ ಚಿತ್ರದ ಮೂಲಕ ಬಣ್ಣ ಹಚ್ಚಿದ ಯತಿ ಸರಿಸುಮಾರು ನೂರೈವತ್ತು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮೈ ಆಟೋಗ್ರಾಫ್, ದಂಡುಪಾಳ್ಯ ಮುಂತಾದ ಚಿತ್ರಗಳು ಯತಿಗೆ ಒಳ್ಳೆಯ ಹೆಸರನ್ನೂ ತಂದುಕೊಟ್ಟಿವೆ. ಸದ್ಯ ಕಲಾ-ವಿಧ ಫಿಲಂ ಅಕಾಡೆಮಿ ಎನ್ನುವ ನಟನಾ ಶಾಲೆಯನ್ನೂ ನಡೆಸುತ್ತಿರುವ ಯತಿ ಕರೋನಾ ಸಂಕಷ್ಟದ ದಿನಗಳಲ್ಲಿ ‘anything can happen over a drink’ ಎನ್ನುವ ಅರ್ಥಪೂರ್ಣವಾದ ಕಿರು ಚಿತ್ರವೊಂದನ್ನು ರೂಪಿಸಿದ್ದಾರೆ. ಇರುವ ಎರಡೂ ಪಾತ್ರಗಳಲ್ಲಿ ಸ್ವತಃ ಯತಿ ಅಭಿನಯಿಸಿದ್ದಾರೆ.

https://m.facebook.com/story.php?story_fbid=3216631115013738&id=100000006436519

ಕರೋನಾ ಸಂದರ್ಭದಲ್ಲಿ ಕುಡಿತ ಅನ್ನೋದು ಬಗೆಬಗೆಯಲ್ಲಿ ಬಾಧಿಸುತ್ತಿದೆ. ವರ್ಷಾನುಗಟ್ಟಲೆಯಿಂದ ಕುಡಿದೇ ಬದುಕಿರುವವರ ಕೈ ಕಾಲು ನಡುಗುತ್ತಿದೆ. ಎಲ್ಲ ಕಡೆ ಎಣ್ಣೆ ಅಂಗಡಿ ಮುಚ್ಚಿದ್ದರೂ ದುಡ್ಡಿದ್ದವರು ಎರಡು ಮೂರು ಪಟ್ಟು ಕೊಟ್ಟು ತಂದು ಗಂಟಲಿಗೆ ಸುರಿದುಕೊಳ್ಳುತ್ತಿದ್ದಾರೆ. ಎಷ್ಟೋ ಜನ ಕುಡಿಯೋ ಅಭ್ಯಾಸವೇ ಇಲ್ಲದಿದ್ದರೂ ತಮ್ಮ ಮನೆಯವರ ಸಂಕಟ ನೋಡಲಾರದೆ ಯಾವಾಗ ಬಾರು ಬಾಗಿಲು ತೆರೆಯುತ್ತದೋ ಅಂತಾ ಕಾದಿದ್ದಾರೆ. ಕುಡಿಯದೇ ಜೀವಿಸಲು ಸಾಧ್ಯವಿಲ್ಲ ಅಂತಾ ಅಂದುಕೊಂಡ ಕೆಲವರು ಪ್ರಾಣಬಿಟ್ಟಿದ್ದಾರೆ. ಇವೆಲ್ಲದಕ್ಕೂ ಪ್ರಶ್ನೆ ಮತ್ತು ಉತ್ತರದಂತೆ ಯತಿರಾಜ್ ಅವರ ಕಿರುಚಿತ್ರ ರೂಪುಗೊಂಡಿದೆ. ಕುಡಿಯುವವರು, ಕುಡಿಯದೇ ಇರುವವರು ಒಂದು ಸಲ ನೋಡಿ; ನಿಮ್ಮ ಅನಿಸಿಕೆ, ತೀರ್ಮಾನಗಳು ಬದಲಾಗಬಹುದು!

ಇನ್ನಷ್ಟು ಓದಿರಿ

Scroll to Top