ಬಡವರ ಬೆನ್ನಿಗೆ ಬಡಿದರಲ್ಲಾ… ಇಂಥವನಿಗೆ ಯಾವ ಶಿಕ್ಷೆ?

Picture of Cinibuzz

Cinibuzz

Bureau Report

ಇಡೀ ಚಿತ್ರರಂಗ, ಕಿರುತೆರೆ ಇವತ್ತು ಕೋವಿಡ್ ತಡೆಯಲು ತಮ್ಮೆಲ್ಲಾ ಕೆಲಸಕಾರ್ಯಗಳನ್ನು, ಸಂಪಾದನೆಯನ್ನು ಪಕ್ಕಕ್ಕಿಟ್ಟು ಕುಂತಿದೆ. ಆದರೆ ಇವನೊಬ್ಬ ಅಕುಲ್ ಬಾಲಾಜಿಗೆ ಕಾಸು ಎಣಿಸಿಕೊಳ್ಳುವುದು ಮುಖ್ಯವಾಯಿತಾ?

ಕೊರೋನಾ ವೈರಸ್ಸು ಜನರ ಬದುಕನ್ನು ಕಿತ್ತು ತಿನ್ನುತ್ತಿದೆ. ಎಲ್ಲಿ ರೋಗ ಉಲ್ಬಣಗೊಳ್ಳುತ್ತದೋ ಅಂತಾ ಸರ್ಕಾರ ಭೀತಿಗೊಂಡಿದೆ. ಜೀವ ಉಳಿಸಿಕೊಂಡರೆ ಸಾಕು ಅಂತಾ ಜನ ದುಡಿಮೆಯನ್ನೂ ಬಿಟ್ಟು ಮನೆಯಲ್ಲಿ ಕೂತಿದ್ದಾರೆ. ಆದರೆ ಇಲ್ಲೊಬ್ಬ ಮೈರ್ ಪುಡುಂಗಿ ತನ್ನ ಲಾಭದ ಕಾರಣಕ್ಕೆ ಎಲ್ಲರ ಉಸಿರಿನ ಜೊತೆ ಆಟವಾಡಿದ್ದಾನೆ. ಅನ್ನಾಹಾರಕ್ಕಾಗಿ ಹೊರಬಂದವರಿಗೂ ಪೊಲೀಸರು ಸಾಯುವಂತೆ ಬಡಿದರಲ್ಲಾ? ಹಣ ಸಂಪಾದನೆಯ ದುರಾಸೆಗೆ ಮಾಡಬಾರದ್ದನ್ನು ಮಾಡುವವರಿಗೆ ಏನು ಶಿಕ್ಷೆಯೋ?

ಟೀವಿ ಶೋಗಳಲ್ಲಿ ಬಾಲವಿಲ್ಲದ ಕೋತಿಯಂತಾಡುವ ಅಕುಲ್ ಬಾಲಾಜಿ ಒಡೆತನದಲ್ಲಿ ದೊಡ್ಡಬಳ್ಳಾಪುರ ಬಳಿ ರೆಸಾರ್ಟೊಂದು ಕಾರ್ಯ ನಿರ್ವಹಿಸುತ್ತಿದೆ. ದೊಡ್ಡಬಳ್ಳಾಪುರದ, ತೂಬಗೆರೆ ಹೋಬಳಿಯ ಲಗುಮೇನಹಳ್ಳಿ ಗ್ರಾಮದಲ್ಲಿ ಅಕುಲ ಸನ್ ಶೈನ್ ಹೆಸರಿನ ರೆಸಾರ್ಟು ನಡೆಸುತ್ತಿದ್ದಾನೆ. ಲೌಕ್ ಡೌನ್, ನಿಷೇಧಾಜ್ಞೆ, ಸರ್ಕಾರದ ಆದೇಶಗಳಿಗೆ ಕ್ಯಾರೇ ಅನ್ನದೆ ಮದುವೆಯೊಂದಕ್ಕೆ ರೆಸಾರ್ಟನ್ನು ಬಾಡಿಗೆಗೆ ಕೊಟ್ಟಿದ್ದ. ಬೆಂಗಳೂರಿನ ನಾಗಾವಾರ ಬಳಿಯಿರುವ ಥಣಿಸಂದ್ರ ಬಡಾವಣೆಯ ಇಪ್ಪತ್ತಕ್ಕೂ ಅಧಿಕ ಮಂದಿ ರಾತ್ರೋ ರಾತ್ರಿ ರೆಸಾರ್ಟಿಗೆ ಬಂದು ಮದುವೆ ಸಿದ್ಧತೆ ನಡೆಸುತ್ತಿದ್ದರು. ಇದನ್ನು ಕಂಡು ಗ್ರಾಮದ ಮಂದಿ ಬೆಚ್ಚಿಬಿದ್ದಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿಯವರೇ ತಮ್ಮ ಮಗನ ಮದುವೆಯನ್ನು ಖಾಸಗಿಯಾಗಿ ನೆರವೇರಿಸಿದ್ದಾರೆ. ಇಲ್ಲಿ ನೋಡಿದರೆ ರೆಸಾರ್ಟಿನಲ್ಲಿ ಮದುವೆ ಏರ್ಪಾಟಾಗುತ್ತಿದೆಯಲ್ಲಾ? ಹತ್ತಾರು ಕಾರುಗಳು ಬಂದು ನಿಲ್ಲುತ್ತಿವೆ. ಯಾರ್ಯಾರು ಎಲ್ಲೆಲ್ಲಿಂದ ಬಂದಿದ್ದಾರೋ? ಇದರಿಂದ ಗ್ರಾಮಸ್ಥರಿಗೆ ಕೊರೋನಾದಂಥಾ ಕಂಟಕ ಮೆತ್ತಿಕೊಂಡರೆ ಏನು ಗತಿ ಎನ್ನುವ ಚಿಂತೆ ಶುರುವಾಗಿತ್ತು. ತಕ್ಷಣ ದೊಡ್ಡಬಳ್ಳಾಪುರ ಠಾಣೆಯ ಇನ್ಸ್‌ಪೆಕ್ಟರ್ ವಿ. ಗಜೇಂದ್ರ ಅವರ ಬಳಿ ಗ್ರಾಮದ ಮಂಜುನಾಥ, ಗಂಗಪ್ಪ ಮುಂತಾದ ಮುಖಂಡರು ದೂರು ನೀಡಿದ್ದರು. ಗ್ರಾಮದವರ ದೂರನ್ನು ಸ್ವೀಕರಿಸಿ ತಕ್ಷಣವೇ ರೆಸಾರ್ಟಿನ ಮಾಲೀಕ ಅಕುಲ್ ಬಾಲಾಜಿ ಮತ್ತು ಆತನ ಪಾರ್ಟನರ್ ಶ್ರೀನಿವಾಸ ಸುಬ್ರಮಣ್ಯಂ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಡೆ ಕಾಯಿದೆ ೧೮೮ ಐಪಿಸಿ ಕಲಂ ೨೬೯ ರ ಅನ್ವಯ ಎಫ್.ಐ.ಆರ್ ದಾಖಲಿಸಿದ್ದಾರೆ.

ಎಲ್ಲಿಂದಲೋ ಬಂದ ಅಕುಲ್ ಬಾಲಾಜಿಗೆ ಕನ್ನಡದ ನೆಲ ಎಲ್ಲವನ್ನೂ ಕಲ್ಪಿಸಿದೆ. ನಿಜಕ್ಕೂ ಈ ಮಣ್ಣಿನ ಋಣದ ಅರಿವಿದ್ದಿದ್ದರೆ ಅಕುಲ್ ಬಾಲಾಜಿ ಇಂಥಾ ನೀಚ ಕೆಲಸಕ್ಕೆ ಕೈಯಿಡುತ್ತಿರಲಿಲ್ಲ. ತಾನು ನಡೆಸುತ್ತಿರುವ ರೆಸಾರ್ಟು ನೂರಾರು ಜನ ವಾಸವಿರುವ ಗ್ರಾಮಕ್ಕೆ ಅಂಟಿಕೊಂಡಿದೆ. ಒಂದು ವೇಳೆ ಎಲ್ಲಿಂದಲೋ ಬಂದವರು ಸೋಂಕು ತಗುಲಿಸಿ ಹೋದರೆ ಅಲ್ಲೇ ಬದುಕುತ್ತಿರುವ ಜೀವಗಳಿಗೆ ಎಂಥಾ ಸಂಕಟ ಒದಗಬಹುದು ಅಂತಾ ಯೋಚಿಸದೇ, ಯಾರೋ ಕಾಸು ಕೊಟ್ಟರು ಅಂತಾ ರೆಸಾರ್ಟು ನೀಡಿದ ಅಕುಲ್ ಬಾಲಾಜಿಗೆ ಜನ ಯಾವುದರಲ್ಲಿ ಬಡಿಯಬೇಕು ಹೇಳಿ? ಏನೋ ದೊಡ್ಡಬಳ್ಳಾಪುರದ ಪೊಲೀಸ್ ಅಧಿಕಾರಿ ಗಜೇಂದ್ರ ಪ್ರಾಮಾಣಿಕತೆಯಿಂದ, ಗ್ರಾಮದ ಜನರ ಕೂಗಿಗೆ ಸ್ಪಂದಿಸಿದ್ದಕ್ಕೆ ಸರಿಹೋಯ್ತು.

ಇಡೀ ಚಿತ್ರರಂಗ, ಕಿರುತೆರೆ ಇವತ್ತು ಕೋವಿಡ್ ತಡೆಯಲು ತಮ್ಮೆಲ್ಲಾ ಕೆಲಸಕಾರ್ಯಗಳನ್ನು, ಸಂಪಾದನೆಯನ್ನು ಪಕ್ಕಕ್ಕಿಟ್ಟು ಕುಂತಿದೆ. ಆದರೆ ಇವನೊಬ್ಬ ಅಕುಲ್ ಬಾಲಾಜಿಗೆ ಕಾಸು ಎಣಿಸಿಕೊಳ್ಳುವುದು ಮುಖ್ಯವಾಯಿತಾ? ಈ ಕೂಡಲೇ ಸಂಬಂಧ ಪಟ್ಟ ಇಲಾಖೆ ಮತ್ತು ಅಧಿಕಾರಿಗಳು ಈತನ ರೆಸಾರ್ಟ್ ಲೈಸೆನ್ಸನ್ನು ರದ್ದುಮಾಡಬೇಕು. ಇವೆಲ್ಲದಕ್ಕೂ ಕಾರಣನಾಗಿರುವ ಅಕುಲ್ ಬಾಲಾಜಿಗೆ ಕಾನೂನು ವ್ಯಾಪ್ತಿಯಲ್ಲಿ ಶಿಕ್ಷೆಗೆ ಗುರಿಪಡಿಸಬೇಕು. ಇನ್ನು, ಕನ್ನಡ ಚಿತ್ರರಂಗ ಅಥವಾ ಕಿರುತೆರೆ ಅಕುಲ್ ಬಾಲಾಜಿಗೆ ಯಾವ ಅವಕಾಶವನ್ನೂ ಕೊಡದೆ ದೂರವಿಡಬೇಕು!

ಇನ್ನಷ್ಟು ಓದಿರಿ

Scroll to Top