ಚಿತ್ರೀಕರಣಕ್ಕೆ ಅನುಮತಿ ನೀಡಿರೋದರಿಂದ ಬಹಳ ಸಂತೋಷವಾಗಿದೆ ಎಂದು ಕಿರುತೆರೆ ಸಂಘದ ಅಧ್ಯಕ್ಷ ಶಿವಕುಮಾರ್, ನಿರ್ಮಾಪಕಿ ಶೃತಿ ನಾಯ್ಡು ಮುಂತಾದವರು ಹಿಗ್ಗುತ್ತಿದ್ದಾರೆ. ಶಿವಕುಮಾರ್ ಆಗಲಿ, ಶೃತಿ ನಾಯ್ಡುವಾಗಲಿ ಏಕಕಾಲಕ್ಕೆ ಮೂರು-ನಾಲ್ಕು ಧಾರಾವಾಹಿಗಳನ್ನು ನಿರ್ಮಿಸುತ್ತಿರುತ್ತಾರೆ.
ಕೊರೋನಾ ಪೀಡೆ ಸಾರಾಸಗಟಾಗಿ ಎಲ್ಲರ ಬದುಕಿಗೂ ಕೊಡಲಿ ಇಟ್ಟಿದೆ. ಮನರಂಜನಾ ಮಾಧ್ಯಮವಂತೂ ಚೇತರಿಸಿಕೊಳ್ಳಲಾಗದಂತೆ ಮಲಗಿದೆ. ಸಿನಿಮಾಗಳ ಮೇಲೆ ಹೂಡಿಕೆಯಾಗಿರುವ ನೂರಾರು ಕೋಟಿ ರುಪಾಯಿಗಳು, ನಿರ್ಮಾಪಕರು ಮಾಡಿರುವ ಸಾಲ, ಬಡ್ಡಿ, ಅಡವಿಟ್ಟ ಆಸ್ತಿಯೆಲ್ಲಾ ಮುಂದಿನ ದಿನಗಳಲ್ಲಿ ಎಷ್ಟು ಜನರ ಜೀವ ತೆಗೆಯುತ್ತದೋ ಗೊತ್ತಿಲ್ಲ. ಸಿನಿಮಾ ನಿರ್ಮಾಪಕರು, ತಂತ್ರಜ್ಞರ ಬದುಕು ಸುಕ್ಕುಗಟ್ಟಿದೆ. ಇದ್ದುದರಲ್ಲೇ ಒಂದಿಷ್ಟು ನೆಮ್ಮದಿಯಾಗಿದ್ದವರು ಕಿರುತೆರೆ ಮಂದಿ. ತಿಂಗಳು ಪೂರ್ತಿ ಕೆಲಸ ಮಾಡುತ್ತಿದ್ದ ಕಾರ್ಮಿಕರು, ಕೈತುಂಬ ದುಡಿಯುತ್ತಿದ್ದ ಕಲಾವಿದರು, ಒಂದೊಂದು ವಾಹಿನಿಯಲ್ಲಿ ಮೂರ್ನಾಲ್ಕು ಸ್ಲಾಟು ಹಿಡಿದು ಉತ್ತಮ ವರಮಾನ ಕಂಡಿದ್ದ ಸೀರಿಯಲ್ ನಿರ್ಮಾಪಕರ ಬದುಕು ಸಿನಿಮಾದವರಿಗಿಂತಾ ಉತ್ತಮ ಮಟ್ಟದಲ್ಲಿತ್ತು. ಇಲ್ಲಿಯೂ ಸವಾಲುಗಳಿವೆ. ಇವತ್ತಿನ ಧಾರಾವಾಹಿಗಳಲ್ಲಿ ಕ್ವಾಲಿಟಿ ಹೆಚ್ಚಿದೆ. ಒಂದಿಷ್ಟು ಟಿ.ಆರ್.ಪಿ. ಕಡಿಮೆಯಾದರೆ ವಾಹಿನಿಯವವರು ವೈಂಡಪ್ ಮಾಡಿ ಬಿಸಾಕುತ್ತಾರೆ ನಿಜ. ಆದರೆ ಸಿನಿಮಾ ಕ್ಷೇತ್ರದಷ್ಟು ಅತಂತ್ರ ಪರಿಸ್ಥಿತಿ ಇಲ್ಲಿಲ್ಲ. ಕಡೇ ಪಕ್ಷ ಹಾಕಿದ ಬಂಡವಾಳವಾದರೂ ವಾಪಾಸು ಬರುತ್ತದೆ. ಬೆರಳೆಣಿಕೆಯ ಸ್ಟಾರ್ ನಟರ ಸಿನಿಮಾಗಳು ರಿಲೀಸಿಗೂ ಮುಂಚೆ ಒಂದು ಮಟ್ಟಕ್ಕೆ ಸೇಫ್ ಆಗುತ್ತವೆ ಅನ್ನೋದು ಬಿಟ್ಟರೆ, ನೂರಕ್ಕೆ ತೊಂಭತ್ತು ಪಸೆಂಟ್ ಚಿತ್ರನಿರ್ಮಾಪಕರಿಗೆ ಬರುತ್ತದೆ ಅನ್ನೋ ನಂಬಿಕೆಯೇ ಬಂಡವಾಳ!

ಈಗ ರಾಜ್ಯ ಸರ್ಕಾರ ಧಾರಾವಾಹಿ ಚಿತ್ರೀಕರಣಕ್ಕಷ್ಟೇ ಅನುಮತಿ ನೀಡಿದೆ. ಮನೆಯೊಳಗೆ ಚಿತ್ರೀಕರಿಸಬೇಕು, ಹೊರಾಂಗಣದಲ್ಲಿ ಶೂಟ್ ಮಾಡಬಾರದು, ಇಪ್ಪತ್ತು ಜನರ ಒಳಗೆ ಕೆಲಸಗಾರರಿರಬೇಕು ಎಂಬಿತ್ಯಾದಿ ಷರತ್ತನ್ನು ವಿಧಿಸಿದೆ; ಸರಿ. ಸಿನಿಮಾ ಚಿತ್ರೀಕರಣಕ್ಕೂ ಇದೇ ನಿಯಮವನ್ನು ಅನುಸರಿಸುವಂತೆ ಹೇಳಿ ಅನುಮತಿ ನೀಡಬಹುದುದಿತ್ತಲ್ಲಾ? ಸರ್ಕಾರದ ನಿರ್ಧಾರ ನೋಡಿದರೆ ಸಿನಿಮಾದವರು ಬರೀ ಬೀದಿಯಲ್ಲಿ ನಿಂತು ಶೂಟಿಂಗ್ ಮಾಡುತ್ತಾರೆ ಅನ್ನುವಂತಿದೆ. ಹಾಗಾದರೆ ಯಾವೆಲ್ಲಾ ಸಿನಿಮಾಗಳು ಮನೆ, ಸ್ಟುಡಿಯೋ ಸೇರಿದಂತೆ ಒಂದೇ ಜಾಗದಲ್ಲಿ ಚಿತ್ರೀಕರಣಗೊಳ್ಳುತ್ತಿವೆಯೋ ಅಂತಾ ಚಿತ್ರಗಳ ಶೂಟಿಂಗಿಗೂ ಪರ್ಮಿಷನ್ ನೀಡಬಹುದಲ್ವೇ? ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣವಿಕ್ಕುವ ರೂಲ್ಸು ಯಾಕೆ?

ಚಿತ್ರೀಕರಣಕ್ಕೆ ಅನುಮತಿ ನೀಡಿರೋದರಿಂದ ಬಹಳ ಸಂತೋಷವಾಗಿದೆ ಎಂದು ಕಿರುತೆರೆ ಸಂಘದ ಅಧ್ಯಕ್ಷ ಶಿವಕುಮಾರ್, ನಿರ್ಮಾಪಕಿ ಶೃತಿ ನಾಯ್ಡು ಮುಂತಾದವರು ಹಿಗ್ಗುತ್ತಿದ್ದಾರೆ. ಶಿವಕುಮಾರ್ ಆಗಲಿ, ಶೃತಿ ನಾಯ್ಡುವಾಗಲಿ ಏಕಕಾಲಕ್ಕೆ ಮೂರು-ನಾಲ್ಕು ಧಾರಾವಾಹಿಗಳನ್ನು ನಿರ್ಮಿಸುತ್ತಿರುತ್ತಾರೆ. ಉಮಾಕಾಂತ್ರಂಥವರಿಗೆ ಕ್ಯಾಮೆರಾ ಸಲಕರಣೆಗಳಿಂದ ಬಾಡಿಗೆ ಬಂದು ಬೀಳುತ್ತದೆ. ಇವರೆಲ್ಲರ ಬ್ಯಾಂಕ್ ಖಾತೆ ಭದ್ರವಾಗುತ್ತದೆ. ನಾಯ್ಡು ಮೇಡಮ್ಮು ಇದೇ ದುಡಿಮೆಯಲ್ಲಿ ಮತ್ತೊಂದೆರಡು ದುಬಾರಿ ಕಾರು ಪರ್ಚೇಸ್ ಮಾಡುತ್ತಾರೆ. ಅದಕ್ಕೆಂದು ಕಲಾವಿದ-ತಂತ್ರಜ್ಞರು ಜೀವ ತೇಯಬೇಕಾ? ಯಾವ್ಯಾವುದೋ ಮೂಲೆಗಳಿಂದ ಬಂದು ಶೂಟಿಂಗಿನಲ್ಲಿ ತೊಡಗುವ ಕಾರ್ಮಿಕರು, ಕಲಾವಿದರಿದ್ದಾರೆ. ಅವರಿಂದ ಕೊರೋನಾ ಹಬ್ಬಿ, ಅದರಿಂದ ಪ್ರಾಣಹಾನಿಯಾದರೆ ಯಾರು ಹೊಣೆ? ಎಲ್ಲೋ ಕೂತು ಕಾಸು ಎಣಿಸುವ ನಿರ್ಮಾಪಕರು ’ನಾವು ಲಕ್ಷಾಂತರ ರುಪಾಯಿ ಕಾಸು ಇನ್ವೆಸ್ಟ್ ಮಾಡಿದ್ದೀವಿ, ನಮಗೆ ಕಷ್ಟವಾಗುತ್ತದೆ’ ಅಂತಾ ಇವರು ಹೇಳಬಹುದು, ಹಾಗಾದರೆ ಸಿನಿಮಾ ನಿರ್ಮಾಪಕರು ಕಲ್ಲು ಕೊಟ್ಟು ಪಿಚ್ಚರ್ ತೆಗೆದಿರ್ತಾರಾ?

ಈಗಲಾದರೂ ಸರ್ಕಾರ ಮತ್ತೊಮ್ಮೆ ಯೋಚಿಸಲಿ. ಕಷ್ಟ-ಸುಖ ಏನೇ ಇರಲಿ ಸಿನಿಮಾ-ಸೀರಿಯಲ್ ಇಂಡಸ್ಟ್ರಿಗೆ ಒಂದೇ ನಿಯಮ ಜಾರಿ ಮಾಡಲಿ. ಒಬ್ಬರಿಗೆ ಅನುಮತಿ ನೀಡಿ ಮತ್ತೊಬ್ಬರಿಗೆ ನಿಷೇಧ ಹೇರುವುದು ಬೇಡ!
ಇದೇ ತಿಂಗಳ 25ರಿಂದ ಸೀರಿಯಲ್ ಚಿತ್ರೀಕರಣ ಶುರು ಮಾಡಬಹುದು ಎಂದು ಸರ್ಕಾರ ಅನುಮತಿ ನೀಡಿರುವುದೇನೋ ನಿಜ. ಆದರೆ ಇದರಿಂದ ಏನೇ ಯಡವಟ್ಟುಗಳಾದರೂ ಸರ್ಕಾರ ಹೊಣೆ ಹೊರುವುದಿಲ್ಲವಂತೆ. ಕಮಿಟಿಯ ಸದಸ್ಯರ ಒಪ್ಪಿಗೆ ಇಲ್ಲದೆ ಶಿವಕುಮಾರ್ ಮತ್ತವರ ಆಪ್ತರು ಸರ್ಕಾರದ ಬಳಿ ಮನವಿ ಮಾಡಲು ಹೋಗಿದ್ದರ ವಿರುದ್ಧವೇ ಸಂಘದಲ್ಲಿ ವಿರೋಧ ವ್ಯಕ್ತವಾಗಿದೆ.











































