ಅಪ್ಪು ಮಾಡಿದ್ದು ಸರೀನಾ?

Picture of Cinibuzz

Cinibuzz

Bureau Report

ಪುನೀತ್‌ ರಾಜ್‌ ಕುಮಾರ್‌ ತಮ್ಮ ಪಿ.ಆರ್.ಕೆ. ಬ್ಯಾನರಿನ ಸಿನಿಮಾಗಳನ್ನು ಡೈರೆಕ್ಟಾಗಿ ಓಟಿಟಿಯಲ್ಲಿ ರಿಲೀಸ್‌ ಮಾಡುತ್ತಿರುವುದರ ಬಗ್ಗೆ ಸಿನಿಮಾವಲಯದಲ್ಲಿ ಒಳಗಿಂದೊಳಗೇ ವಿರೋಧಗಳು ಕೇಳಿಬರುತ್ತಿವೆ. ಅದೆಲ್ಲ ಏನೇ ಇರಲಿ, ಬಿರಿಯಾನಿ ಬೆಂದಿದೆಯೋ ಇಲ್ಲವೋ ಅನ್ನೋದೂ ವಾರದೊಪ್ಪತ್ತಿನಲ್ಲಿ ಗೊತ್ತಾಗಲಿದೆ.

ರೇಡಿಯೋ ಪ್ರಾಂಕ್ ಕಾರ್ಯಕ್ರಮದ ಮೂಲಕವೇ ಪ್ರಸಿದ್ಧಿ ಪಡೆದವರು ಡ್ಯಾನಿಶ್‌ ಸೇಠ್.‌ ಹಂಬಲ್‌ ಪೊಲಿಟಿಷಿಯನ್‌ ನೊಗರಾಜ್‌ ಎನ್ನುವ ವಿಚಿತ್ರ ಹೆಸರಿನ ಸಿನಿಮಾದ ಮೂಲಕ ದಾನೀಶ್‌ ಹೀರೋ ಆಗುವ ಪ್ರಯತ್ನ ಮಾಡಿದ್ದರು. ಈ ಚಿತ್ರವನ್ನು ನೆನಪಿಟ್ಟುಕೊಂಡಿದ್ದೀರಾದರೆ ಡ್ಯಾನಿಶ್ ಸೇಠ್ ಎಂಬ ನಟ ಕೂಡಾ ನೆನಪಿರುತ್ತಾರೆ. ಅಷ್ಟಕ್ಕೂ ಆ ಚಿತ್ರ ಕ್ರಿಯೇಟ್ ಮಾಡಿದ್ದ ಹೈಪ್ ಏನು ಸಣ್ಣದಾ? ಈ ಕಂಗ್ಲಿಷ್‌ ಸಿನಿಮಾ ನೋಡಿದ ಕನ್ನಡಿಗರಿಗೆ ಮೈ ಪರಚಿಕೊಳ್ಳುವಂತಾಗಿತ್ತು. ಅಂಥಾದ್ದೊಂದು ಭಯಾನಕ ಪಬ್ಲಿಸಿಟಿಯಿದ್ದರೂ ಕೂಡಾ ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ ಥೇಟರುಗಳಲ್ಲಿ ಜನ ಇಲ್ಲದೆ ಮುಗ್ಗಲು ಹಿಡಿದಿದ್ದ!

ಈ ಸೋಲಿನಾಚೆಗೂ ಕೂಡಾ ಕನ್ನಡದ ಪ್ರೇಕ್ಷಕರು ಡ್ಯಾನಿಶ್ ಸೇಠ್ ಬಗ್ಗೆ ಸಂಪೂರ್ಣವಾಗೇನೂ ನಂಬಿಕೆ ಕಳೆದುಕೊಂಡಿಲ್ಲ. ಯಾಕೆಂದರೆ ಕ್ರಿಯೇಟಿವ್ ಆಗಿ ಆಲೋಚಿಸುವ ಮತ್ತು ಒಂದೊಳ್ಳೆ ಚಿತ್ರ ಮಾಡ ಬಹುದಾದ ಕಸುವು ಅವರಲ್ಲಿದೆ ಅಂತಲೇ ನಂಬಿದ್ದಾರೆ. ಎಲ್ಲರಿಗೂ ಗೊತ್ತಿರುವ ಪ್ರಕಾರ ಡ್ಯಾನಿಶ್ ಸೇಠ್ ಅವರ ಎರಡನೇ ಚಿತ್ರವನ್ನು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿರ್ಮಾಣ ಮಾಡಿದ್ದಾರೆ. ʻ‍‍ಫ್ರೆಂಚ್‌ ಬಿರಿಯಾನಿʼ ಹೆಸರಿನ  ಈ ಚಿತ್ರವನ್ನು ಖ್ಯಾತ ನಿರ್ದೇಶಕ ನಾಗಾಭರಣರ ಪುತ್ರ ಪನ್ನಗಾಭರಣ ನಿರ್ದೇಶನ ಮಾಡಿದ್ದಾರೆ. ಪುನೀತ್ ರಾಜ್ ಕುಮಾರ್ ನಿರ್ಮಾಣ ಮಾಡಿರೋ ಪಿಆರ್‍ಕೆ ಆಡಿಯೋ ಸಂಸ್ಥೆ ಒಂದು ಮಟ್ಟದ ಗೆಲುವು ಕಂಡಿದೆ. ಅದರ ಮೂಲಕ ಚೆಂದದ ಹಾಡುಗಳು ಲೋಕಾರ್ಪಣೆಗೊಳ್ಳುತ್ತಿವೆ. ಈ ಮೂಲಕ ಹೊಸಾ ಬಗೆಯ ಚಿತ್ರಗಳಿಗೆ ಪುನೀತ್ ಬೆಂಬಲವಾಗಿ ನಿಂತಿದ್ದಾರೆ. ಕವಲು ದಾರಿ ಮತ್ತು ಮಾಯಾ ಬಜ಼ಾರ್‌ ನಂತರ ಪಿ.ಆರ್.ಕೆ. ಬ್ಯಾನರಿನಲ್ಲಿ ಬಿಡುಗಡೆಯಾಗುತ್ತಿರುವ ಮೂರನೇ ಚಿತ್ರವಿದು. ಇನ್ನೂ ಕೆಲವಾರು ಸಿನಿಮಾಗಳನ್ನು ಈ ಸಂಸ್ಥೆ ರೆಡಿಮಾಡಿಟ್ಟುಕೊಂಡಿದ್ದು ಲಾಕ್‌ ಡೌನ್‌ ಕಾರಣದಿಂದ ಬಿಡುಗಡೆ ಸಾಧ್ಯವಾಗಿಲ್ಲ.

ಸದ್ಯ ‍ಫ್ರೆಂಚ್‌ ಬಿರಿಯಾನಿ ನಟ ಡ್ಯಾನಿಷ್‌ ಮತ್ತು ನಿರ್ದೇಶಕ ಪನ್ನಗ ಪಾಲಿಗೆ ಎರಡನೇ ಸಿನಿಮಾ. ಡ್ಯಾನಿಶ್ನ ಮೊದಲ ಸಿನಿಮಾ ಅಡ್ಡಡ್ಡ ಮಲಗಿತ್ತು. ಪನ್ನಗಾ ನಿರ್ದೇಶಿಸಿದ್ದ ಹ್ಯಾಪಿ ನ್ಯೂ ಇಯರ್‌ ಸಿನಿಮಾ ನೋಡುಗರ ಮನಗೆದ್ದಿತ್ತು. ಈ ಸಲ ಫ್ರೆಂಚ್‌ ಬಿರಿಯಾನಿಯಲ್ಲಿ ಈ ಇಬ್ಬರ ನಸೀಬು ಏನಾಗುತ್ತದೋ ಗೊತ್ತಿಲ್ಲ.

ಕೊರೋನಾ ಸಮಸ್ಯೆಯಿಂದ  ರೆಡಿ ಇರುವ ಎಷ್ಟೋ ಚಿತ್ರಗಳು ತೆರೆಗೆ ಬರಲು ಆಗಿಲ್ಲ. ಸಾಕಷ್ಟು ಜನ ಥೇಟರ್‌ ಓಪನ್‌ ಆದರೆ ಸಾಕು ಅಂತಾ ಕಾದು ಕುಂತಿದ್ದಾರೆ. ಕೆಲವರು ಥೇಟರಿನ ಸಾವಾಸ ಬೇಡ ಓಟಿಟಿಯಲ್ಲಿ ಒಳ್ಳೇ ರೇಟು ಸಿಕ್ಕರೆ ಕೊಟ್ಟು ಕೈತೊಳೆದುಕೊಳ್ಳೋಣ ಅನ್ನೋ ಪ್ಲಾನಿನಲ್ಲಿದ್ದಾರೆ. ಚಿತ್ರರಂಗದ ಸಮಸ್ಯೆಗಳು ಗೊತ್ತಿದ್ದು, ಥೇಟರುಗಳನ್ನು ಉಳಿಸಿಕೊಳ್ಳಬೇಕು ಅಂತಾ ಬಯಸಿರುವ ಕೆಲವು ತಂತ್ರಜ್ಞರು ಮಾತ್ರ ಎಷ್ಟೇ ದಿನಗಳಾದರೂ ಕಾದು ನಮ್ಮ ಚಿತ್ರವನ್ನು ಚಿತ್ರಮಂದಿರಕ್ಕೆ ತರುತ್ತೇವೆ. ನಾವು ನಿರ್ಮಿಸಿದ ಸಿನಿಮಾಗಳನ್ನು ಓಟಿಟಿಗೆ ಮಾರಿಬಿಟ್ಟರೆ, ಸಿನಿಮಾ ವಿರತರಕು, ಪ್ರದರ್ಶಕರು, ಥೇಟರ್‌ ಮಾಲೀಕರು, ಅಲ್ಲಿ ದುಡಿಯುವ ಪಾಡೇನಾಗಬೇಡ? ಎಂದು ಎಲ್ಲರ ಹಿತ ಬಯಸುವವರೂ ಇದ್ದಾರೆ. ಇದರ ನಡುವೆಯೇ ಪುನೀತ್‌ ರಾಜ್‌ ಕುಮಾರ್‌ ತಮ್ಮ ಪಿ.ಆರ್.ಕೆ. ಬ್ಯಾನರಿನ ಸಿನಿಮಾಗಳನ್ನು ಡೈರೆಕ್ಟಾಗಿ ಓಟಿಟಿಯಲ್ಲಿ ರಿಲೀಸ್‌ ಮಾಡುತ್ತಿರುವುದರ ಬಗ್ಗೆ ಸಿನಿಮಾವಲಯದಲ್ಲಿ ಒಳಗಿಂದೊಳಗೇ ವಿರೋಧಗಳು ಕೇಳಿಬರುತ್ತಿವೆ. ಅದೆಲ್ಲ ಏನೇ ಇರಲಿ, ಬಿರಿಯಾನಿ ಬೆಂದಿದೆಯೋ ಇಲ್ಲವೋ ಅನ್ನೋದೂ ವಾರದೊಪ್ಪತ್ತಿನಲ್ಲಿ ಗೊತ್ತಾಗಲಿದೆ.

ಇನ್ನಷ್ಟು ಓದಿರಿ

Scroll to Top