ಗಣೇಶ್ ಕಾಸರಗೋಡು ಅವರ ಕಥೆ-ಚಿತ್ರಕಥೆ…

Picture of Cinibuzz

Cinibuzz

Bureau Report

ಕರ್ನಾಟಕದ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ (ಎಂ ಗೋವಿಂದ ಪೈ) ಜೀವನ ತೆರೆಗೆ ಬರಲಿದೆ.  ಗೋವಿಂದ ಪೈ ಅವರ ತವರಿನವರಾದ ಸ್ಯಾಂಡಲ್ವುಡ್ ನಟ ರಘುಭಟ್ ನಾಡಿನ ಹೆಮ್ಮೆಯ ಕವಿಯ ಬಯೋಪಿಕ್ ನಿರ್ಮಿಸಲು ಮುಂದಾಗಿದ್ದಾರೆ.

ಅನ್ವೇಷಿ ಚಿತ್ರದ ಮೂಲಕವೇ ನಾಯಕ ನಟನಾಗಿ ಅಡಿಯಿರಿಸಿದ್ದ ರಘು ಭಟ್ ಬಾಲ ಕಲಾವಿದರಾಗಿ ಬಣ್ಣ ಹಚ್ಚಿದ್ದವರು. ಶಿವರಾಜ್ ಕುಮಾರ್ ಅಭಿನಯದ ಕೃಷ್ಣಲೀಲೆ ಚಿತ್ರದ ಮೂಲಕ ನಟನೆ ಆರಂಭಿಸಿದ್ದ ಅವರು ಕಲೆಯ ವ್ಯಾಮೋಹದಿಂದಲೇ ನಾಯಕ ನಟನಾಗಿಯೂ ಹೊರ ಹೊಮ್ಮಿದ್ದರು. ಲವ್‌ ಯೂ ಟೂ, ಡ್ರೀಮ್‌ ಗರ್ಲ್‌, ದಾದಾ ಈಸ್ ಬ್ಯಾಕ್, ಅನ್ವೇಷಿ, ಕರ್ವ ಮುಂತಾದ ಚಿತ್ರಗಳಲ್ಲಿ ಗಮನಾರ್ಹವಾದ ಅಭಿನಯ ನೀಡಿದ್ದರು. ಹೀಗೆ ತಮ್ಮ ವೃತ್ತಿ ಜೀವನವನ್ನು ಹೊಳಪಾಗಿಸಿಕೊಂಡಿರೋ ರಘು ಭಟ್  ಈಗ ಸಿನಿಮಾ ನಿರ್ಮಾಪಕರಾಗುತ್ತಿದ್ದಾರೆ.

ಸದ್ಯ ಮಹಾಕವಿ ಸಿನಿಮಾದ  ತೆರೆಮರೆಯ ಕೆಲಸಗಳು ನಡೆಯುತ್ತಿದ್ದು, ಎಲ್ಲಾ ಅಂದುಕೊಂಡಂತೆ ಆಗಿದ್ದರೆ  ಗೋವಿಂದ ಪೈ ಅವರ ಜನ್ಮದಿನವಾದ ಮಾರ್ಚ್ 23ರಂದು ಮುಹೂರ್ತ ನೆರವೇರಿ, ಸಿನಿಮಾ ಸೆಟ್ಟೇರಿರುತ್ತಿತ್ತು. ಆದರೆ,  ಕೊರೋನಾ ಲಾಕ್ಡೌನ್ ಕಾರಣದಿಂದ ಚಿತ್ರೀಕರಣ ಆರಂಭವಾಗಿಲ್ಲ. ಅನುಭವಿ, ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ಅವರು ಕಥೆ-ಚಿತ್ರಕಥೆ ಬರೆದಿದ್ದಾರೆ.  ರಘುಭಟ್ ತಮ್ಮ ಲಕ್ಷ್ಮೀ ಗಣೇಶ್ ಪ್ರೊಡಕ್ಷನ್ನಲ್ಲಿ ಸಿನಿಮಾ ನಿರ್ಮಿಸುತ್ತಿದ್ದಾರೆ. ಸದ್ಯದಲ್ಲೇ ನಿರ್ದೇಶಕರು ಯಾರೆಂದು ತಿಳಿಯಲಿದೆ.

ಕಲಾವಿದರ ವಿಷಯಕ್ಕೆ ಬಂದರೆ ಸ್ಯಾಂಡಲ್ವುಡ್ನ ಸ್ಟಾರ್ ನಟರೊಬ್ಬರು ಗೋವಿಂದ ಪೈ ಪಾತ್ರದಲ್ಲಿ ಮಿಂಚುವುದು ಕನ್ಫರ್ಮ್ ಆಗಿದೆ. ಆ ನಟರೊಂದಿಗೆ ಮಾತುಕತೆ ಅಂತಿಮ ಹಂತದಲ್ಲಿದೆ. ಅಲ್ಲದೆ ಅನೇಕ ಯುವ  ಮತ್ತು ಹಿರಿಯ ಕಲಾವಿದರು ಅಭಿನಯಿಸಲಿದ್ದಾರೆ ಎಂದು ನಟ, ನಿರ್ಮಾಪಕ ರಘುಭಟ್ ತಿಳಿಸಿದ್ದಾರೆ. ಇದು ನಾಡಿನ ಹೆಮ್ಮೆಯ ಹಿರಿಯ ಕವಿಗಳ ಬಯೋಪಿಕ್ ಮಾತ್ರವಲ್ಲದೆ ಪಕ್ಕಾ ಕಮರ್ಷಿಯಲ್ ಸಿನಿಮಾ ಕೂಡ ಹೌದು. ಗೋವಿಂದ ಪೈ ಅವರ ಜೀವನ, ನಡೆದುಬಂದ ಹಾದಿ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರಿಗೂ ತೋರಿಸಬೇಕು. ಅದಕ್ಕೆ ಸಿನಿಮಾಕ್ಕಿಂತ ಉತ್ತಮ ಮಾರ್ಗ, ಮಾಧ್ಯಮ ಬೇರಿಲ್ಲ. ಹಾಗಾಗಿ ಸಿನಿಮಾ ಮಾಡಲು ಮುಂದಾಗಿದ್ದೇನೆ ಎಂದಿದ್ದಾರೆ. ಕರ್ನಾಟಕ ಮತ್ತು ಕೇರಳ ಗಡಿಭಾಗದ ಮಂಜೇಶ್ವರದಲ್ಲಿ 1883 ಮಾರ್ಚ್ 23  ಜನಸಿದ್ದರು. 80 ವರ್ಷದ ತುಂಬು ಜೀವನ ನಡೆಸಿದ್ದ ಅವರು 1963 ಸೆಪ್ಟೆಂಬರ್ 23ರಂದು ವಿಧಿವಶರಾದರು. 1949ರಲ್ಲಿ ಮದರಾಸು ಸರ್ಕಾರ (1956ರಲ್ಲಿ ಕರ್ನಾಟಕ ಏಕೀಕರಣಕ್ಕಿಂತ ಮೊದಲು ದಕ್ಷಿಣ ಕನ್ನಡ ಜಿಲ್ಲೆಯು ಆಗಿನ ಮದರಾಸು ರಾಜ್ಯದಲ್ಲಿ, ಅಂದರೆ ಈಗಿನ ತಮಿಳುನಾಡಿನಲ್ಲಿತ್ತು.)  ಗೋವಿಂದ ಪೈ ಅವರಿಗೆ ರಾಷ್ಟ್ರಕವಿ ಎಂದು ಸನ್ಮಾನಿತ್ತು.

ಇನ್ನಷ್ಟು ಓದಿರಿ

Scroll to Top