ಉಪ್ಪಿ ಮನೆ ಹುಡುಗ ಹೀರೋ ಆದ…!

Picture of Cinibuzz

Cinibuzz

Bureau Report

ಉಪೇಂದ್ರ ನಿರ್ದೇಶಕ‌ರಾಗಿ, ನಟರಾಗಿ‌ ಹೆಸರಾದವರು.‌ ತಮ್ಮ ಅದ್ಭುತ ಪ್ರತಿಭೆ ಮೂಲಕ ಕನ್ನಡದಲ್ಲಷ್ಟೇ ಅಲ್ಲದೇ ಇತರ ಭಾಷೆಗಳಲ್ಲಿಯೂ ಹೆಸರು ಮಾಡಿ ಸೂಪರ್ ಸ್ಟಾರ್ ಆದವರು‌ ಉಪೇಂದ್ರ. ಈಗ ಅವರ ಕುಟುಂಬದಿಂದ ಚಿತ್ರರಂಗಕ್ಕೆ ಮತ್ತೊಬ್ಬ ನಾಯಕ ನಟನ ಆಗಮನವಾಗುತ್ತಿದೆ. ಹೌದು. ಉಪೇಂದ್ರ ಅವರ ಅಣ್ಣನ‌ ಮಗ ನಿರಂಜನ್ ಸುಧೀಂದ್ರ ಪೂರ್ಣಪ್ರಮಾಣದ ನಾಯಕನಾಗಿ ಬರುತ್ತಿದ್ದಾರೆ ‘ಸೂಪರ್ ಸ್ಟಾರ್’ ಚಿತ್ರದ ಮೂಲಕ.

ಇತ್ತೀಚಿಗೆ ಚಿತ್ರದ ಕ್ಯಾರೆಕ್ಟರ್ ಟೀಸರ್ ಅನ್ನು ರೋರಿಂಗ್ ಸ್ಟಾರ್ ಶ್ರೀಮುರಳಿ ಬಿಡುಗಡೆ ಮಾಡಿದರು. ಟೀಸರ್ ಬಿಡುಗಡೆ ನಂತರ ಮಾತನಾಡಿದ ಶ್ರೀಮುರಳಿ‌ ಎಲ್ಲಾ ನಟರಿಗೂ ಈ ಅವಕಾಶ ಸಿಗುವುದಿಲ್ಲ. ಸ್ಟಾರ್ ಆದ ನಂತರ ಸೂಪರ್ ಸ್ಟಾರ್ ಆಗುತ್ತಾರೆ.‌ ಆದರೆ‌ ನಿರಂಜನ್ ಸೂಪರ್ ಸ್ಟಾರ್ ಆಗಿಯೇ ಬರುತ್ತಿದ್ದಾರೆ. ಟೀಸರ್ ಚೆನ್ನಾಗಿದೆ. ನಿರಂಜನ್ ಗೆ ಉತ್ತಮ ಭವಿಷ್ಯವಿದೆ ಎಂದ ಶ್ರೀಮುರಳಿ ಉಪೇಂದ್ರ ಅವರ ಎ ಹಾಗೂ ಓಂ ಚಿತ್ರಗಳನ್ನು ಬ್ಲ್ಯಾಕ್ ಟಿಕೇಟ್ ಕೊಂಡು ಗಾಂಧಿ ಕ್ಲಾಸ್ ನಲ್ಲಿ ನೋಡಿದ್ದನ್ನು ನೆನಪಿಸಿಕೊಂಡರು. ಉಪೇಂದ್ರ ಅವರು ಮಾತನಾಡಿ ಈಗಿ‌ನ ಹುಡುಗರಿಗೆ ನಾವು ಹೇಳುವುದೇನು ಇಲ್ಲ. ಏನಿದ್ದರೂ ಅವರಿಂದ ತಿಳಿದುಕೊಳ್ಳುವುದಷ್ಟೇ. ನಿರಂಜನ್ ಚಿತ್ರಕ್ಕಾಗಿ ತುಂಬಾ ವರ್ಕ್ ಔಟ್ ಮಾಡುತ್ತಿದ್ದಾನೆ. ಅವನಿಗೆ ಒಳ್ಳೆದಾಗಲಿ ಎಂದರು. ಪ್ರಿಯಾಂಕ ಉಪೇಂದ್ರ, ನಿರ್ಮಾಪಕ ಸೌಂದರ್ಯ ಜಗದೀಶ್, ನಿರ್ದೇಶಕರಾದ ಚೇತನ್ ಕುಮಾರ್, ಮಹೇಶ್ ಯುವನಟರಾದ ಅಕ್ಷಿತ್ ಶಶಿಕುಮಾರ್, ಶ್ರೇಯಸ್ಸ್ ಕೆ ಮಂಜು, ಅಲೋಕ್ ಮುಂತಾದ ಗಣ್ಯರು ತಮ್ಮ ಹಿತನುಡಿಗಳ ಮೂಲಕ ನಿರಂಜನ್ ಗೆ ಶುಭ ಕೋರಿದರು. ಉಪೇಂದ್ರ ಅವರ ತಂದೆ, ತಾಯಿ, ಅಣ್ಣ ಅತ್ತಿಗೆ, ಮಕ್ಕಳಾದ ಆಯುಷ್, ಐಶ್ವರ್ಯ ಮುಂತಾದ ಕುಟುಂಬದ ಸದಸ್ಯರ ಹಾಗೂ ಅಭಿಮಾನಿಗಳ ಉಪಸ್ಥಿತಿ ಸಮಾರಂಭದ ಕಳೆಯನ್ನು ಮತ್ತಷ್ಟು ಹೆಚಿಸಿತ್ತು. ನಿರಂಜನ್ ಅವರ ಹುಟ್ಟುಹಬ್ಬದ ದಿನವೇ ಟೀಸರ್ ಬಿಡುಗಡೆಯಾಗಿದ್ದು ವಿಶೇಷ.

ತೆಲುಗಿನ ಖ್ಯಾತ ನಿರ್ದೇಶಕ ಸುಕುಮಾರ್ ಅವರ ಬಳಿ ಕಾರ್ಯ ನಿರ್ವಹಿಸಿರಿವ ರಮೇಶ್ ವೆಂಕಟೇಶ್ ಬಾಬು ಈ ಚಿತ್ರದ ನಿರ್ದೇಶಕರು. ಕಥೆ, ಚಿತ್ರಕಥೆ ಕೂಡ ನಿರ್ದೇಶಕರದೆ. ಮೈಲಾರಿ ಅವರು ಚಿತ್ರದ ನಿರ್ಮಾಪಕರು. ರಾಘವೇಂದ್ರ ಅವರು ಸೂಪರ್ ಸ್ಟಾರ್ ನ ಸಂಗೀತ ನಿರ್ದೇಶಕ ರಾದರೆ, ಯೋಗಿ ಛಾಯಾಗ್ರಹಣ ಮಾಡುತ್ತಿದ್ದಾರೆ. ಚಿತ್ರದ ಕ್ಯಾರೆಕ್ಟರ್ ಟೀಸರ್ ಬಿಡುಗಡೆ ಮೂಲಕ ಚಿತ್ರದ ಚಟುವಟಿಕೆಗೆ ಚಾಲನೆ ನೀಡಿದ್ದು, ಸದ್ಯದಲ್ಲೇ ‌ಮುಹೂರ್ತ ಸಮಾರಂಭ ನಡೆಯಲಿದೆ ಎಂದು ನಿರ್ದೇಶಕ ರಮೇಶ್ ವೆಂಕಟೇಶ್ ಬಾಬು‌ ತಿಳಿಸಿದರು.

ಇನ್ನಷ್ಟು ಓದಿರಿ

Scroll to Top