“ಬಿಚ್ಚುಗತ್ತಿ” ಸಿನಿಮಾ ಕನ್ನಡ ಚಿತ್ರರಂಗದ ವಿಭಿನ್ನ ಪ್ರಯತ್ನಗಳಲ್ಲಿ ಒಂದು ಅಂತಹ ಸಿನಿಮಾದಲ್ಲಿ ನಟಿಸಿದಕ್ಕೆ ನನಗೆ ತುಂಬಾ ಹೆಮ್ಮೆ ಇದೆ. ಅತಿ ಶೀಘ್ರದಲ್ಲಿ ನನ್ನ ಮುಂದಿನ ಚಿತ್ರದ ತಾರಾಗಣ ಆಗು ಫಸ್ಟ್ ಲುಕ್ ಜೊತೆಗೆ ನಿಮ್ಮಮುಂದೆ ಬರಲಿದ್ದೇನೆ! ನಿಮ್ಮ ಪ್ರೀತಿಯ ಆಶೀರ್ವಾದದ ನಿರೀಕ್ಷೆಯಲ್ಲಿ
– ನಿಮ್ಮ ರಾಜ್ ವರ್ಧನ್
ಖ್ಯಾತ ಹಾಸ್ಯ ನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ವಿಭಿನ್ನ ಚಿತ್ರದ ಮೂಲಕ ವಿಶಿಷ್ಟವಾದ ಪಾತ್ರವೊಂದರೊಂದಿಗೆ ಪ್ರೇಕ್ಷಕರೆದುರು ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಹೀರೋ ಆಗಲು ಬೇಕಾದ ಅಷ್ಟೂ ಕ್ವಾಲಿಟಿಗಳಿರುವ ರಾಜವರ್ಧನ್ ನಟಿಸಿದ ಮೊದಲ ಚಿತ್ರದಲ್ಲಿಯೇ ಪ್ರೇಕ್ಷಕರನ್ನು ಬೆರಗಾಗಿಸಿದ್ದ ನಟ. ನೂರೊಂದು ನೆನಪು ಸಿನಿಮಾದಿಂದ ಬೆಳ್ಳಿತೆರೆಗೆ ಪರಿಚಯವಾದ ರಾಜ್ ನಂತರ ಬಿಚ್ಚುಗತ್ತಿ ಸಿನಿಮಾದ ಮೂಲಕ ಎಲ್ಲರ ಗಮನ ಸೆಳೆದವರು.

ಆರಡಿ ಎತ್ತರದ, ಅಜಾನುಬಾಹು ರಾಜ್ ವರ್ಧನ್ ಈಗ ಮತ್ತೊಂದು ಸಿನಿಮಾಗೆ ಅಣಿಯಾಗಿದ್ದಾರೆ. ನೂರೊಂದು ನೆನಪು ಚಿತ್ರವನ್ನು ನಿರ್ದೇಶಿಸಿದ್ದ ಕುಮರೇಶ್ ಅವರೇ ಈ ಚಿತ್ರವನ್ನೂ ನಿರ್ದೇಶಿಸುತ್ತಿದ್ದಾರೆ. ರಾಜ್ ಪಾಲಿಗೆ ಮೊದಲ ಎರಡು ಸಿನಿಮಾಗಳು ಹೇಳಿಕೊಳ್ಳುವಂತಾ ಗೆಲುವು ತಂದುಕೊಡಲಿಲ್ಲ. ಇದಕ್ಕೆ ಕಾರಣ ಈ ಎರಡೂ ಸಿನಿಮಾಗಳ ನಿರ್ಮಾಪಕರಿಗೆ ಸಿನಿಮಾ ಆರಂಭದಲ್ಲಿದ್ದ ಜೋಷ್ ನಂತರದಲ್ಲಿ ಕಾಣೆಯಾಗಿತ್ತು. ಪ್ರಚಾರ ನೀಡುವಲ್ಲಿ ನಿರ್ಮಾಪಕರು ಮುತುವರ್ಜಿ ತೋರಿರಲಿಲ್ಲ. ಸಿನಿಮಾಗಳು ಉತ್ತಮ ವಿಮರ್ಶೆ ಪಡೆದರೂ ಅವು ಪ್ರೇಕ್ಷಕರನ್ನು ತಲುಪುವಲ್ಲಿ ವಿಫಲವಾಗಿದ್ದವು. ಈ ಸಲ ರಾಜ್ ವರ್ಧನ್ ಗೆ ಅಂತಾ ಸಂಕಷ್ಟ ಎದುರಾಗದಿರಲಿ. ಈಗ ಆರಂಭವಾಗಿರುವ ಇನ್ನೂ ಹೆಸರಿಡದ ಚಿತ್ರದ ಪೋಸ್ಟರು ಥ್ರಿಲ್ ಮೂಡಿಸುವಂತಿದೆ. ರಾಜ್ ಲುಕ್ಕು, ಖದರ್ ಸೇರಿದಂತೆ ಯಾವುದರಲ್ಲಿಯೂ ಬಾಲಿವುಡ್ ನಟರಿಗೆ ಕಡಿಮೆ ಇರದ ರಾಜ್ ಈ ಸಲ ಕನ್ನಡದ ಜೊತೆಗೆ ತಮಿಳಿನಲ್ಲೂ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಗೆಲ್ಲಲು ಬೇಕಿರುವ ಪ್ರತಿಭೆ, ಅರ್ಹತೆ ಎಲ್ಲವೂ ಇರುವ ರಾಜ್ ಅಲುಗಾಡದಂತೆ ನಿಲ್ಲಲಿ.











































