ಇದು ಮಂಸೋರೆ ಸಿನಿಮಾ!

Picture of Cinibuzz

Cinibuzz

Bureau Report

ಈ ಹಿಂದೆ ಹರಿವು, ನಾತಿಚರಾಮಿ ಚಿತ್ರಗಳನ್ನು ನಿರ್ದೇಶಿಸಿದ್ದವರು ಮಂಸೋರೆ. ಈ ನೆಲದ, ಜನರ ಸಂಕಟ, ತೊಳಲಾಟಗಳನ್ನೇ ದೃಶ್ಯಗಳನ್ನಾಗಿ ಕಟ್ಟಿಕೊಡುವ ಮಂಸೋರೆ ಈಗ ಆಕ್ಟ್ ೧೯೭೮ ಎಂಬ ಥ್ರಿಲ್ಲರ್ ಚಿತ್ರವೊಂದನ್ನು ರೂಪಿಸಿದ್ದಾರೆ. ನಟಿ ಯಜ್ಞಾಶೆಟ್ಟಿ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯಾವುದೇ ಕಟ್ ಇಲ್ಲದೇ ‘ಯು’ ಪ್ರಮಾಣಪತ್ರ ನೀಡಿದೆ. ಇತ್ತೀಚೆಗಷ್ಟೇ ಚಿತ್ರದ ಟ್ರೇಲರನ್ನು ಪುನೀತ್ ರಾಜ್‌ಕುಮಾರ್ ಅವರು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಮಂಸೋರೆ ಒಬ್ಬ ಗರ್ಭಿಣಿ ಹೆಂಗಸು, ಒಂದು ಗನ್, ವಾಕಿಟಾಕಿ, ಬಾಂಬ್ ಈ ನಾಲ್ಕು ಪ್ರಮುಖ ಅಂಶಗಳನ್ನು ಇಟ್ಟುಕೊಂಡು ಕಥೆ ಮಾಡಿದ್ದೇನೆ. ಮೂರು ಟ್ರ್ಯಾಕ್‌ನಲ್ಲಿ ಚಿತ್ರಕಥೆ ಸಾಗುತ್ತದೆ. ಗರ್ಭಿಣಿಯ ಪಾತ್ರಕ್ಕೆ ಕನ್ನಡ ಸರಿಯಾಗಿ ಬರುವಂಥ ಒಬ್ಬ ನಟಿ ಬೇಕಾಗಿತ್ತು, ಸುಮಾರು ಜನರನ್ನು ಅಂದುಕೊಂಡೆವು. ಕೊನೆಗೆ ಯಜ್ಞಾಶೆಟ್ಟಿ ಅವರೇ ಸೂಕ್ತ ಎನಿಸಿತು. ಅವರು ಮಂಗಳೂರಿನಲ್ಲಿದ್ದಾರೆಂದು ತಿಳಿದು, ಅವರನ್ನು ಸಂಪರ್ಕಿಸಿ ಕಥೆ ಹೇಳಿದಾಗ ನಾನು ಸದ್ಯ ಯಾವುದೇ ಚಿತ್ರ ಮಾಡುತ್ತಿಲ್ಲ, ಆದರೂ ನಿಮ್ಮ ಕಥೆ ಕೇಳಿದ ಮೇಲೆ ಪಾತ್ರ ಮಾಡಬೇಕೆನ್ನಿಸಿತು ಎಂದು ಒಪ್ಪಿದರು.

ಸುಮಾರು ೫೨ ಜನ ಪ್ರಮುಖ ಪಾತ್ರಧಾರಿಗಳು ಈ ಚಿತ್ರದಲ್ಲಿದ್ದಾರೆ. ಬಿಗ್ ಪ್ರಾಜೆಕ್ಟ್ ಆದರೂ ಕಡಿಮೆ ಅವಧಿಯಲ್ಲಿ ಪ್ಲಾನ್ ಮಾಡಿದ್ದೆವು. ನಾನು ಮಾಡಿರುವುದು ಕೇವಲ ಎರಡೇ ಸಿನಿಮಾ ಆದರೂ ಎಲ್ಲರೂ ನನ್ನ ಮಾತಿಗೆ ಬೆಲೆಕೊಟ್ಟು ಬಿಡುವು ಮಾಡಿಕೊಂಡು ಬಂದು ಆಕ್ಟ್ ಮಾಡಿದ್ದಾರೆ. ಆಗಸ್ಟ್ 9ಕ್ಕೆ ಮುಹೂರ್ತ ನಡೆಸಿ ಸೆಪ್ಟೆಂಬರ್‌ನಲ್ಲಿ ಶೂಟಿಂಗ್ ಸ್ಟಾರ್ಟ್ ಮಾಡಿ ಒಂದೇ ತಿಂಗಳಲ್ಲಿ ಮುಗಿಸಿದೆವು. ಚಿತ್ರದ ಮುಖ್ಯಕಥೆ ನಡೆಯೋದೇ ಒಂದು ಬಿಲ್ಡಿಂಗ್‌ನಲ್ಲಿ, ೧೫ ದಿನ ಬಿಲ್ಡಿಂಗ್ ಒಳಗೆ, ೧೫ ದಿನ ಹೊರಾಂಗಣದಲ್ಲಿ ಶೂಟ್ ಮಾಡಿದ್ದೇವೆ. ಇಡೀ ಚಿತ್ರವನ್ನು ೩ ಕ್ಯಾಮೆರಾ ಬಳಸಿ ಸೆರೆ ಹಿಡಿಯಲಾಗಿದೆ.

ಹರಿವು ಒಬ್ಬ ತಂದೆ ಮಗನ ಸಂಬಂಧವನ್ನು ಹೇಳಿದರೆ, ನಾತಿಚರಾಮಿ ಆಧುನಿಕ ಮಹಿಳೆಯರ ಕಥೆ ಹೇಳುತ್ತದೆ. ಈಗ ಆಕ್ಟ್-1978‌ ಮೂಲಕ ಸಮಾಜದ ಲೂಪ್ ಹೋಲ್‌ಗಳನ್ನು ತೆರೆದಿಡುವ ಪ್ರಯತ್ನ ಮಾಡಿದ್ದೇನೆ. ನನ್ನ ಇಡೀ ಕಥೆಯ ಮೂಡ್‌ಗೆ ತಕ್ಕಹಾಗೆ ಮ್ಯೂಸಿಕ್ ಮಾಡುವುದು ಒಂದು ಸವಾಲಿನ ಕೆಲಸವಾಗಿತ್ತು. ಅದನ್ನು ರಾಹುಲ್ ಶಿವಕುಮಾರ್ ‌ ಹಾಗೂ ರೋನಾಡ ಬಕ್ಕೇಶ್ ಅವರು ಅದ್ಭುತವಾಗಿ ನಿಭಾಯಿಸಿದ್ದಾರೆ. ನಿಜಕ್ಕೂ ಇದು ಮಂಸೋರೆಯ ಸಿನಿಮಾನಾ ಅಂತ ಅನಿಸುತ್ತದೆ, ಸಿಂಗಲ್‌ಸ್ಕ್ರೀನ್ ಪ್ರಾಬ್ಲಂ ಸರಿಯಾದ ಕೂಡಲೇ ಚಿತ್ರವನ್ನು ರಿಲೀಸ್ ಮಾಡುತ್ತಿದ್ದೇವೆ ಎಂದು ಹೇಳಿದರು.

ಚಿತ್ರದ ಟ್ರೇಲರ್ ರಿಲೀಸ್ ಮಾಡಿದ ಪುನೀತ್ ರಾಜ್‌ಕುಮಾರ್ ಮಾತನಾಡಿ ಟ್ರೇಲರ್ ನೋಡಿದಾಗ ಒಂದಷ್ಟು ಪ್ರಶ್ನೆ ಮೂಡುತ್ತದೆ. ಸ್ವಲ್ಪ ರಾ ಕಂಟೆಂಟ್ ಆದರೂ ಚಿತ್ರಕಥೆಯಲ್ಲಿ ಹೊಸತನ ಇದೆ. ಮೈಸೂರಿನಲ್ಲಿ ನಮ್ಮ ಯುವರತ್ನ ಚಿತ್ರದ ಶೂಟಿಂಗ್ ನಡೆಯುತ್ತಿದ್ದಾಗ ಪಕ್ಕದಲ್ಲೇ ಇವರ ಚಿತ್ರವೂ ನಡೀತಿತ್ತು. ನಾನಲ್ಲಿಗೆ ಹೋದಾಗ ಮಂಸೋರೆ ಒಂದುಲೈನ್ ಕಥೆ ಹೇಳಿದರು. ಚೆನ್ನಾಗಿತ್ತು, ಇಲ್ಲಿ ಎಲ್ಲಾ ಒಳ್ಳೊಳ್ಳೇ ಹಿರಿಯ ಕಲಾವಿದರೇ ನಟಿಸಿದ್ದಾರೆ. ಟೆಕ್ನಿಕಲಿ ಚಿತ್ರ ತುಂಬಾ ಚೆನ್ನಾಗಿ ಕಾಣುತ್ತದೆ. ನನ್ನ ಕೈಲಿ ಏನಾಗುತ್ತೋ ಅಷ್ಟು ಪ್ರೊಮೋಟ್ ಮಾಡುತ್ತೇನೆ ಎಂದು ಹೇಳಿದರು.

ಹಿರಿಯ ನಟಿ ಶೃತಿ ಮಾತನಾಡುತ್ತ, ಥಿಯೇಟರ್ ಸ್ಟಾರ್ಟ್ ಆದರೂ ಹೊಸ ಚಿತ್ರಗಳು ಬರೋವರೆಗೂ ಜನರನ್ನು ಥಿಯೇಟರಿಗೆ ಕರೆತರಲು ಸಾಧ್ಯವಿಲ್ಲ, ಈ ಚಿತ್ರದಲ್ಲಿ ನನ್ನದು ಚಿಕ್ಕ ಪಾತ್ರವಾದರೂ ಸಹಜವಾಗಿ ಅಭಿನಯಿಸುವುದಕ್ಕೆ ಅವಕಾಶವಿತ್ತು. ಒಳ್ಳೆಯ ವಿಚಾರಗಳನ್ನು ಜನರಿಗೆ ಹೇಳಿ ಒಪ್ಪಿಸುವುದು ತುಂಬಾ ಕಷ್ಟ. ಈ ಸಿನಿಮಾ ಪ್ರತಿಯೊಬ್ಬ ರೈತರಿಗೂ ಮುಟ್ಟಬೇಕು ಎಂದು ಹೇಳಿದರು. ಟಿಕೆ ದಯಾನಂದ್ ಈ ಚಿತ್ರಕ್ಕೆ ಚಿತ್ರಕಥೆ ಮತ್ತು ಸಂಭಾಷಣೆ ಹೆಣೆದಿದ್ದಾರೆ. ದೇವರಾಜ್ ಆರ್. ನಿರ್ಮಾಪಕರಾಗಿ ಬಂಡವಾಳ ಹೂಡಿದರೆ, ಸತ್ಯ ಹೆಗಡೆ ಕ್ಯಾಮೆರಾ ವರ್ಕ್ ಇದ್ದು, ಪ್ರಮೋದ್ ಶೆಟ್ಟಿ  ಪೋಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಸಂಚಾರಿ ವಿಜಯ್, ಅಚ್ಯುತ್‌ಕುಮಾರ್, ಕೃಷ್ಣಾ ಹೆಬ್ಬಾಳೆ, ದತ್ತಣ್ಣ, ಶರಣ್ಯ, ಶೋಭರಾಜ, ಅವಿನಾಶ್  ತಾರಾಗಣ ಈ ಚಿತ್ರದಲ್ಲಿದೆ. ರಾಘು ಶಿವಮೊಗ್ಗ, ಬಿ. ಸುರೇಶ ಇಬ್ಬರೂ ನಿರ್ದೇಶಕರು ಮನ್ಸೋರೆಯ ಈ ಚಿತ್ರದಲ್ಲಿ ಮುಖ್ಯ ಪಾತ್ರಗಳನ್ನು ನಿಭಾಯಿಸಿದ್ದಾರೆ.

ಇನ್ನಷ್ಟು ಓದಿರಿ

Scroll to Top