ತಮಿಳಿನಲ್ಲಿ ಇತ್ತೀಚೆಗೆ ಕನ್ನಡಿಗ ಸಾಧಕ ಕ್ಯಾಪ್ಟನ್ ಗೋಪಿನಾಥ್ ಅವರ ಬದುಕನ್ನು ಆಧರಿಸಿ ಸೂರರೈ ಪೊಟ್ರು ಹೆಸರಿನ ಸಿನಿಮಾ ಬಿಡುಗಡೆಯಾಗಿ ಅಪಾರ ಜನಪ್ರಿಯತೆ ಪಡೆದಿತ್ತು. ಈ ನೆಲದಲ್ಲಿ ಹುಟ್ಟಿ ಜಗತ್ತಿನಾದ್ಯಂತ ಹೆಸರು ಮಾಡಿದ ಇನ್ನೂ ಸಾಕಷ್ಟು ಜನ ಸಾಧಕರಿದ್ದಾರೆ. ಅವರಲ್ಲಿ ಡಾ. ವಿಜಯ ಸಂಕೇಶ್ವರ ಕೂಡಾ ಒಬ್ಬರು. ಏನೇನೂ ಇಲ್ಲದೆ, ಶೂನ್ಯ ಬಂಡವಾಳದಿಂದ ಉದ್ಯಮ ಆರಂಭಿಸಿ ಇವತ್ತು ಸಂಕೇಶ್ವರರು ಬೆಳೆದು, ಸಂಸ್ಥೆಯನ್ನು ಕಟ್ಟಿನಿಲ್ಲಿಸಿರುವ ಪರಿ ನಿಜಕ್ಕೂ ಅದ್ಭುತ. ಇಷ್ಟೆಲ್ಲಾ ಸಾಧನೆಯ ಹಿಂದೆ ಕಡುಗಷ್ಟದ ಕಥೆಯಿದೆ. ಅಗಣಿತ ಜನಕ್ಕೆ ದಾರಿದೀಪವಾಗಬಲ್ಲ ಬದುಕಿನ ಪಾಠವಿದೆ. ಅದು ಸಿನಿಮಾ ರೂಪದಲ್ಲಿ ಈಗೆ ತೆರೆ ಮೇಲೆ ಮೂಡಲಿದೆ…
ಸಾರಿಗೆ ಕ್ಷೇತ್ರ, ಪತ್ರಿಕೋದ್ಯಮ, ಮಾಧ್ಯಮ ಹಾಗು ಹಲವಾರು ವಿಭಾಗಗಳಲ್ಲಿ ಪರಿಣತಿ ಹೊಂದಿರುವ ಪ್ರತಿಷ್ಠಿತ ವಿ ಆರ್ ಎಲ್ ಸಮೂಹ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಹಾಗು ಪ್ರೊಮೋಟರ್ ಆದ ಡಾ. ವಿಜಯ ಸಂಕೇಶ್ವರರ ಪುತ್ರರಾದ ಆನಂದ ಸಂಕೇಶ್ವರ ಅವರು ಇದೀಗ ವಿ ಆರ್ ಎಲ್ ಮೀಡಿಯಾ ಸಂಸ್ಥೆಯ ಅಡಿಯಲ್ಲಿ “ವಿ ಆರ್ ಎಲ್ ಫಿಲಂ ಪ್ರೊಡಕ್ಷನ್ಸ್” ಹೆಸರಿನ ಸ್ವಂತ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ.

ಈ ನಿರ್ಮಾಣ ಸಂಸ್ಥೆಯ ಚೊಚ್ಚಲ ಕನ್ನಡ ಸಿನಿಮಾ ಪದ್ಮಶ್ರೀ ಡಾ.ವಿಜಯ ಸಂಕೇಶ್ವರರ ಜೀವನಾಧಾರಿತ – ಚಿತ್ರವಾಗಿದೆ. 1976 ನೇ ಇಸವಿಯಲ್ಲಿ ಒಂದು ಟ್ರಕ್ ನಿಂದ ಶುರುವಾಗಿ, ಇವತ್ತಿಗೆ ಭಾರತದ ಅತಿದೊಡ್ಡ ಫ್ಲೀಟ್ ಮಾಲೀಕರಾಗಿ, ಪತ್ರಿಕೆ ಹಾಗು ಮಾಧ್ಯಮ ರಂಗದಲ್ಲಿ ನಡೆದು ಬಂದ ಡಾ.ವಿಜಯ ಸಂಕೇಶ್ವರರ ಅಧ್ಭುತ ಹಾಗು ರೋಚಕ ಕಥೆಯನ್ನು ಆಧರಿಸಿ, ಕನ್ನಡ ಚಿತ್ರ ರಂಗದ ಮೊದಲ ಅಫಿಷಿಯಲ್ ಹಾಗು ಕಮರ್ಷಿಯಲ್ ಬೈಯೋಪಿಕ್ ಮೂಡಿ ಬರುತ್ತಿದೆ.
ವಿ ಆರ್ ಎಲ್ ಫಿಲಂ ಪ್ರೊಡಕ್ಷನ್ಸ್ ಲಾಂಛನದಲ್ಲಿ ಆನಂದ ಸಂಕೇಶ್ವರ ಅವರು ನಿರ್ಮಿಸುತ್ತಿರುವ ಈ ಚಿತ್ರದ ಫಸ್ಟ್ ಲುಕ್/ಪೋಸ್ಟರ್ ಅನ್ನು ಚಿತ್ರ ತಂಡ ಬಿಡುಗಡೆ ಮಾಡುತ್ತಿದ್ದೆ. ಈ ಚಿತ್ರಕ್ಕೆ “ವಿಜಯಾನಂದ” ಎಂಬ ಶೀರ್ಷಿಕೆ ಇದ್ದು, ರಿಷಿಕಾ ಶರ್ಮಾರವರು ಈ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಕನ್ನಡ ಚಿತ್ರ ರಂಗದಲ್ಲಿ ಸತತವಾಗಿ ೮ ವರ್ಷಗಳಿಂದ ಸಹಾಯಕ ನಿರ್ದೇಶಕಿಯಾಗಿ, ಸಿನೆಮಾ ಹಾಗು ಸೀರಿಯಲ್ ನಟನೆ, ಕಲಾ ವಿನ್ಯಾಸ, ವಸ್ತ್ರ ವಿನ್ಯಾಸ ಹೀಗೆ ಹಲವಾರು ವಿಭಾಗಗಳಲ್ಲಿ ಅನುಭವವನ್ನು ಹೊಂದಿರುವ ರಿಷಿಕಾರವರು ಕನ್ನಡ ಚಿತ್ರ ರಂಗದ ಭೀಷ್ಮ ಎಂದೇ ಹೆಸರಾದ ಜೆ. ವಿ . ಅಯ್ಯರ್ ರವರ ಸಂಭಂದಿಕರು (Grand Niece).

ಈ ಹಿಂದೆ “ಟ್ರಂಕ್” ಎಂಬ ಕನ್ನಡದ ಹಾರರ್ ಚಿತ್ರವನ್ನು ನಿರ್ದೇಶಿಸಿದ್ದ ಮಹಿಳಾ ನಿರ್ದೇಶಕಿ “ರಿಷಿಕಾ ಶರ್ಮ”, ಆ ಚಿತ್ರದ ಮೇಕಿಂಗ್ ಹಾಗು ನಿರ್ದೇಶನಕ್ಕೆ ಅಪಾರ ಮೆಚ್ಚುಗೆ ಪಡೆದಿದ್ದರು. ಇದೇ ಟ್ರಂಕ್ ಸಿನಿಮಾಗೆ ಬಣ್ಣ ಹಚ್ಚಿದ್ದ ಉತ್ತರ ಕರ್ನಾಟಕದ ಪ್ರತಿಭಾವಂತ ನಾಯಕ ನಟರಾದ ನಿಹಾಲ್ ರಂಗಭೂಮಿ ಹಿನ್ನಲೆ ಇಂದ ಬಂದು ಭಾರತಿ ಮತ್ತು ಗಂಗಾ ಸೀರಿಯಲ್ ಗಳಲ್ಲಿ , ಚೌಕ ಮತ್ತು ಟ್ರಂಕ್ ಸಿನೆಮಾದಲ್ಲಿ, ಹಲವಾರು ಮಾಧ್ಯಮದಲ್ಲಿ ಆಂಕರ್ ಆಗಿ ಕೂಡ ಪಾತ್ರವಹಿಸಿದ್ದರು. ತಮ್ಮ ಮೊದಲನೇ ನಾಯಕ ನಟನೆಯ ಟ್ರಂಕ್ ಚಿತ್ರದಲ್ಲಿನ ನಟನೆಗೆ ಅಪಾರ ಮೆಚ್ಚುಗೆಯನ್ನು ಪಡೆದಿದ್ದರು. ಇದೀಗ “ವಿಜಯಾನಂದ” ಸಿನಿಮಾಗೆ ಡಾ. ವಿಜಯ ಸಂಕೇಶ್ವರರ ಪಾತ್ರಕ್ಕೆ ನಾಯಕ ನಟರಾಗಿ ಬಣ್ಣ ಹಚ್ಚಿದ್ದಾರೆ.
ಇದೇ ಆಗಸ್ಟ್ ೨ನೆ ತಾರೀಕು ಡಾ.ವಿಜಯ ಸಂಕೇಶ್ವರರ ಹುಟ್ಟು ಹಬ್ಬದ ಪ್ರಯುಕ್ತವಾಗಿ ಚಿತ್ರ ತಂಡ ಫಸ್ಟ್ ಲುಕ್/ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಪೋಸ್ಟರ್ ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಸ್ಯಾಂಡಲ್ ವುಡ್ ಹಾಗೂ ಎಲ್ಲ ಕ್ಷೇತ್ರದ ಗಣ್ಯರು ಈ ಪೋಸ್ಟರ್ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡುತ್ತಿದ್ದಾರೆ.

ಚಿತ್ರ ತಂಡ ಸರಿ ಸುಮಾರು ಎರಡು ವರ್ಷಗಳಿಂದ ಸತತವಾಗಿ ಈ ಚಿತ್ರಕ್ಕೆ ಸಿದ್ಧತೆಯನ್ನು ಮಾಡಿ ಕೊಳ್ಳುತ್ತಿದ್ದು, ತೆಲುಗು ಮತ್ತು ಮಲಯಾಳಂ ಚಿತ್ರ ರಂಗದ ಖ್ಯಾತ ಸಂಗೀತ ನಿರ್ದೇಶಕರಾದ ಗೋಪಿ ಸುಂದರ್ “ವಿಜಯಾನಂದ” ಚಿತ್ರಕ್ಕೆ ಹಿನ್ನಲೆ ಸಂಗೀತ ಮತ್ತು ಸಂಗೀತ ನಿರ್ದೇಶಕರಾಗಿ ಕೈ ಜೋಡಿಸಿದ್ದಾರೆ. ಈ ಚಿತ್ರ ತಂಡಕ್ಕೆ ಬಹಳಷ್ಟು ದೊಡ್ಡ ನಟ, ನಟಿಯರು ಹಾಗು ತಂತ್ರಜ್ಞರು ಇದ್ದಾರೆ, ಆದಷ್ಟು ಬೇಗ ಇವರೆಲ್ಲರ ಪರಿಚಯವನ್ನು ಹಾಗೆ ಚಿತ್ರೀಕರಣದ ಮತ್ತಷ್ಟು ವಿಷಯವನ್ನು ಚಿತ್ರ ತಂಡ ಇಷ್ಟರಲ್ಲೇ ಮಾಡಿಕೊಡಲಿದೆ.

ಈ ಹಿಂದೆ ನಮ್ಮ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿ, ಹರಸಿ, ಹಾರೈಸಿದ ಪತ್ರಿಕಾ ಮಾಧ್ಯಮ ಹಾಗು ಟಿ ವಿ ಮಾಧ್ಯಮದವರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಾ, ಈ ನಮ್ಮ ಮುಂದಿನ ದೊಡ್ಡ ಹೆಜ್ಜೆ “ವಿಜಯಾನಂದ” ಕನ್ನಡ ಚಿತ್ರ ರಂಗದ ಮೊದಲ ಅಫೀಷಿಯಲ್ ಹಾಗು ಕಮರ್ಷಿಯಲ್ ಜೀವನಾಧಾರಿತ ಚಿತ್ರಕ್ಕೂ ಕೂಡ ನಿಮ್ಮೆಲ್ಲರ ಬೆಂಬಲ ಮತ್ತು ಪ್ರೋತ್ಸಾಹವಿರಲಿ ಎಂದು ಕೇಳಿ ಕೊಳ್ಳುತಿದ್ದೇವೆ.











































