ಇನ್ನೂ ಮುಗಿದಿಲ್ಲವೇ ಕುಚಿಕ್ಕೂ ಗೆಳೆಯರ ಮುನಿಸು?

Picture of Cinibuzz

Cinibuzz

Bureau Report

ಇಂದಿನಿಂದ ಕೆಸಿಸಿಎಲ್ ಕ್ರಿಕೆಟ್ ಟೂರ್ನಮೆಂಟ್ ಆರಂಭವಾಗಲಿದೆ. ಈ ಆರಂಭದ ಕ್ಷಣಗಳೇ ಕಿಚ್ಚಾ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಡುವಿನ ಮುನಿಸಿನ್ನೂ ಕೊನೆಗೊಂಡಿಲ್ಲ ಎಂಬ ವಿಚಾರವನ್ನು ತೆರೆದಿಟ್ಟಿದೆ!

ಈಗ್ಗೆ ತಿಂಗಳ ಹಿಂದೆ ದರ್ಶನ್ ಮತ್ತು ಸುದೀಪ್ ಅವರ ಗೆಳೆತನ ಮತ್ತೆ ಕೂಡಿಕೊಳ್ಳುತ್ತದೆ ಎಂಬಂಥಾ ವಾತಾವರಣ ನಿರ್ಮಾಣವಾಗಿತ್ತು. ಖುದ್ದು ರೆಬೆಲ್ ಸ್ಟಾರ್ ಅಂಬರೀಶ್ ಅವರೇ ಈ ಕುಚಿಕ್ಕು ಗೆಳೆಯರನ್ನು ವೇದಿಕೆಯೊಂದರಲ್ಲಿ ಮತ್ತೆ ಒಂದಾಗಿಸಲಿದ್ದಾರೆಂಬ ಸುದ್ದಿಯೂ ಹಬ್ಬಿಕೊಂಡಿತ್ತು. ಇದನ್ನು ಕೇಳಿ ದರ್ಶನ್ ಮತ್ತು ಸುದೀಪ್ ಅಭಿಮಾನಿಗಳೆಲ್ಲ ಸಹಜವಾಗಿಯೇ ಖುಷಿಯಾಗಿದ್ದರು. ಈ ಎಲ್ಲ ವಾತಾವರಣ ನೋಡಿದವರು ಈ ಬಾರಿಯ ಕೆಸಿಸಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಇವರಿಬ್ಬರೂ ಜೊತೆಗೂಡಿ ಆಡುತ್ತಾರೆಂದೇ ಅಂದುಕೊಂಡಿದ್ದರು.

ಆದರೆ ಇದೀಗ ಟೂರ್ನಿ ಆರಂಭವಾಗಿದೆ. ಆದರೆ ಕಾಲಾಂತರಗಳ ಈ ಮುನಿಸು ಮಾತ್ರ ಮುಗಿದಿಲ್ಲ. ಈ ಮಾತಿಗೆ ಸುದೀಪ್ ಅವರು ನೀಡಿದೊಂದು ಉತ್ತರವೇ ಸಾಕ್ಷಿಯಾಗುತ್ತದೆ. ಈ ಟೂರ್ನಿಯಲ್ಲಿ ದರ್ಶನ್ ಅವರು ಆಡಲಿದ್ದಾರಾ ಎಂಬ ಮಾಧ್ಯಮ ಮದಿಯ ಪ್ರಶ್ನೆಗೆ ಸುದೀಪ್ ‘ನಾವು ಯಾರಿಗೂ ವೈಯಕ್ತಿಕವಾಗಿ ಆಹ್ವಾನ ನೀಡಿಲ್ಲ. ಯಾರಿಗೂ ಬರಬೇಡಿ ಅಂತಲೂ ಹೇಳಿಲ್ಲ. ಯಾರೇ ಬಂದರೂ ಆಡಿ ಹೋಗಲೇನೂ ಅಭ್ಯಂತರವಿಲ್ಲ’ ಅಂತ ಮಾರ್ಮಿಕವಾಗಿ ಮಾತಾಡಿದ್ದಾರೆ. ಇದು ಹಳೇ ಮುನಿಸಿನ ಮುಂದುವರಿಕೆಯಂತೆಯೇ ಕಾಣಿಸುತ್ತಿದೆ.

ಈ ಟೂರ್ನಿ ಈ ಹಿಂದೆ ದರ್ಶನ್ ಮತ್ತು ಕಿಚ್ಚ ಸುದೀಪ್ ಜೊತೆಯಾಗಿ ಆಡಿದ್ದಾಗಲೇ ರಂಗು ಪಡೆದುಕೊಂಡಿತ್ತು. ಈ ಬಾರಿ ಮತ್ತೆ ಅಂಥಾದ್ದೇ ರಂಗೇರಲಿದೆ ಅಂತ ಕಾದು ಕೂತಿದ್ದವರಿಗೆಲ್ಲ ನಿಜಕ್ಕೂ ನಿರಾಸೆಯಾಗಿದೆ. ಈ ಮುನಿಸು ಯಾವ ಕಾಲದವರೆಗೆ ಮುಂದುವರೆಯಲಿದೆಯೋ ಅಂತ ಅಭಿಮಾನಿಗಳಂತೂ ಚಿಂತಾಕ್ರಾಂತರಾಗಿದ್ದಾರೆ!

#

ಇನ್ನಷ್ಟು ಓದಿರಿ

Scroll to Top