ಬಿಗ್ಬಾಸ್ ಸ್ಪರ್ಧಿಯಾಗಿದ್ದ ದಯಾಳ್ ಆ ಕರಾಳ ರಾತ್ರಿ ಚಿತ್ರದ ಮೂಲಕ ಭರಪೂರ ಗೆಲುವೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಚಿತ್ರದ ಯಶಸ್ಸಿನ ಬೆನ್ನಲ್ಲಿಯೇ ದಯಾಳ್ ಪುಟ 109 ಎಂಬ ವಿಶಿಷ್ಟವಾದ ಚಿತ್ರವೊಂದನ್ನು ನಿರ್ದೇಶನ ಮಾಡುತ್ತಿದ್ದಾರೆ. ಗಣೇಶ ಚತುರ್ತಿಯ ಸಂದರ್ಭದಲ್ಲಿ ಈ ಚಿತ್ರದ ಹಾಡಿನ ಚಿತ್ರೀಕರಣ ಪೂರ್ಣಗೊಳ್ಳುವ ಮೂಲಕ ಚಿತ್ರೀಕರಣಕ್ಕೂ ತೆರೆಯೆಳೆಯೋ ಹಂತ ತಲುಪಿಕೊಂಡಿದೆ.

ಈ ಹಬ್ಬದ ಆಸುಪಾಸಿನಲ್ಲಿಯೇ ದಯಾಳ್ ಬಿಗಿಯಾದ ಶೂಟಿಂಗ್ ಶೆಡ್ಯೂಲ್ ಹಾಕಿಕೊಂಡಿದ್ದರು. ಅದರಂತೆ ಬೆಂಗಳೂರಿನ ಹೆಚ್ಎಂಟಿ ಫ್ಯಾಕ್ಟರಿ ಆವರಣದಲ್ಲಿ ಪುಟ 109ರ ವಿಶೇಷವಾದ ಹಾಡೊಂದನ್ನು ಚಿತ್ರೀಕರಿಸಲಾಗಿದೆ. ಇದರಲ್ಲಿ ನಾಯಕ ಜಯ ಕಾರ್ತಿಕ್ ಪೊಲೀಸ್ ಅಧಿಕಾರಿಯ ಗೆಟಪ್ಪಿನಲ್ಲಿ ಮಿಂಚಿದ್ದಾರೆ.

ಪುಟ 109 ಎಂಬ ಟೈಟಲ್ಲೇ ವಿಶೇಷವಾಗಿದೆ. ಇದೊಂದು ಅಪರಾಧ ವೃತ್ತಾಂತವಾ, ಮರ್ಡರ್ ಮಿಸ್ಟರಿಯಾ ಎಂಬೆಲ್ಲ ಪ್ರಶ್ನೆಗಳಿವೆ. ದಯಾಳ್ ಪದ್ಮನಾಭನ್ ಭಿನ್ನವಾದೊಂದು ಕಥಾ ವಸ್ತುವನ್ನು ಆರಿಸಿಕೊಂಡು ಇಡೀ ಚಿತ್ರವನ್ನು ಬೇರೆಯದ್ದೇ ರೀತಿಯಲ್ಲಿ ಕಟ್ಟಿಕೊಡುತ್ತಾರೆಂಬ ನಂಬಿಕೆಯೂ ಪ್ರೇಕ್ಷಕರಲ್ಲಿದೆ. ಆ ಕರಾಳ ರಾತ್ರಿಯಲ್ಲಿ ಸಿಕ್ಕ ಗೆಲುವು ದಯಾಳ್ ತೆರೆದಿರೋ ಪುಟ ೧೦೯ರಲ್ಲಿಯೂ ನಳನಳಿಸುವ ಲಕ್ಷಣಗಳೂ ಇವೆ.

ಈ ಮೂಲಕವೇ ಜೆಕೆ ಮತ್ತು ದಯಾಳ್ ಪದ್ಮನಾಭನ್ ಮತ್ತೆ ಜೊತೆಯಾಗಿ ಕೆಲಸ ಮಾಡಿದ್ದಾರೆ. ಹೀರೋಗೆ ಬೇಕಾದ ಎಲ್ಲ ಗುಣಗಳನ್ನೂ ಹೊಂದಿರುವ ಜೆಕೆ ಸೀರಿಯಲ್ ಜಗತ್ತಿನಲ್ಲಿ ಸ್ಟಾರ್ ನಟರಾಗಿ ದಾಖಲಾದವರು. ಆದರೆ ಅದೇಕೋ ಚಿತ್ರರಂಗದಲ್ಲಿ ಹೀರೋ ಆಗಿ ನೆಲೆಗೊಳ್ಳಲು ಅವರಿಗೆ ಕೊಂಚ ಹಿನ್ನಡೆಯಾಗಿತ್ತು. ಆದರೆ ಆ ಕೊರಗನ್ನು ದಯಾಳ್ ನಿರ್ದೇಶನದ ಆ ಕರಾಳ ರಾತ್ರಿ ಚಿತ್ರ ನೀಗಿಸಿದೆ. ಪುಟ ೧೦೯ ಜೆಕೆ ಸಿನಿಮಾ ಜೀವನದ ಪುಸ್ತಿಕೆಯಲ್ಲಿ ಗೆಲುವಿನ ಅಧ್ಯಾಯವಾಗಿ ದಾಖಲಾಗುತ್ತಾ ಎಂಬ ನಿರೀಕ್ಷೆ ಪ್ರೇಕ್ಷಕ ವಲಯದಲ್ಲಿದೆ!
#











































