ದುರ್ಯೋಧನ-ಅಭಿಮನ್ಯು ಕಾಳಗದಲ್ಲಿ ಕಂಗಾಲಾದ್ರಾ ಮುನಿರತ್ನ?

Picture of Cinibuzz

Cinibuzz

Bureau Report

ಇದೀಗ ಮಂಡ್ಯ ಲೋಕಸಭಾ ಕ್ರೇತ್ರದಲ್ಲಿ ರಣ ಕದನ ಚಾಲ್ತಿಯಲ್ಲಿದೆ. ಅತ್ತ ಕಾಂಗ್ರೆಸ್, ಜೆಡಿಎಸ್ ಪಾಳೆಯದಿಂದ ನಿಖಿಲ್ ಕಣಕ್ಕಿಳಿದಿದ್ದರೆ ಇತ್ತ ಸುಮಲತಾ ಅಂಬರೀಶ್ ಸ್ವತಂತ್ರ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದಾರೆ. ಸುಮಲತಾ ಪರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಎಂಟ್ರಿ ಕೊಡುತ್ತಲೇ ಇಡೀ ಕಣದ ರಂಗೇ ಬದಲಾಗಿ ಹೋಗಿದೆ. ಈ ವಿದ್ಯಮಾನದಿಂದ ಎಲ್ಲ ಪಕ್ಷಗಳ ಮುಖಂಡರಿಗೆ ಅದೆಂಥಾ ಒತ್ತಡ ಉಂಟಾಗಿದೆಯೋ ಗೊತ್ತಿಲ್ಲ. ಆದರೆ ಓರ್ವ ನಿರ್ಮಾಪಕರಾಗಿ ಮುನಿರತ್ನ ಮಾತ್ರ ಕಂಗಾಲಾದಂತಿದೆ!

ಮೇಲು ನೋಟಕ್ಕೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಮತ್ತು ನಿಖಿಲ್ ಮಧ್ಯೆ ಹಣಾಹಣಿ ಇದೆ ಎಂಬಂತೆ ಕಾಣಿಸುತ್ತಿದೆ. ಆದರೆ ಅದು ದುಯೋಧನ ಮತ್ತು ಅಭಿಮನ್ಯು ನಡುವಿನ ಕಾಳಗವೂ ಹೌದು. ಕುರುಕ್ಷೇತ್ರ ಎಂಬ ಭಾರೀ ಬಜೆಟ್ಟಿನ ಚಿತ್ರ ನಿರ್ಮಾಣ ಮಾಡಿರೋ ಮುನಿರತ್ನರ ಕಣ್ಣುಗಳಲ್ಲಿ ಮಂಡ್ಯ ಲೋಕಸಭಾ ಚುನಾವಣಾ ಅಖಾಡ ಅಕ್ಷರಶಃ ಕುರುಕ್ಷೇತ್ರ ಯುದ್ಧದಂತೆಯೇ ಕಾಣಿಸುತ್ತಿದ್ದರೂ ಅಚ್ಚರಿಯೇನಿಲ್ಲ!

ದರ್ಶನ್ ಹೇಳಿಕೇಳಿ ನಿಖಿಲ್ ವಿರುದ್ಧ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಕುರುಕ್ಷೇತ್ರ ಚಿತ್ರೀಕರಣ ಆರಂಭವಾದಾಗಿನಿಂದಲೂ ಕೂಡಾ ನಿಖಿಲ್ ಮೇಲೆ ದರ್ಶನ್ ಗೆ ಅಸಮಾಧಾನವಿತ್ತೆಂಬ ಮಾತುಗಳಿದ್ದವು. ವಿನಾ ಕಾರಣ ಅಭಿಮನ್ಯು ಪಾತ್ರಧಾರಿ ನಿಖಿಲ್ ನನ್ನು ಮರೆದಾಡಿಸಲಾಗುತ್ತಿದೆ ಅನ್ನೋದು ದರ್ಶನ್ ಅಸಮಾಧಾನಕ್ಕೆ ಕಾರಣ ಎಂದೂ ಹೇಳಲಾಗಿತ್ತು. ಈಗಂತೂ ದರ್ಶನ್ ನಿಖಿಲ್ ವಿರುದ್ಧ ಸುಮಲತಾ ಪರವಾಗಿ ಮಂಡ್ಯ ಕ್ಷೇತ್ರದಲ್ಲಿದ್ದಾರೆ. ಇದರಿಂದ ಬಿಡುಗಡೆಗೆ ಸಜ್ಜಾಗಿರೋ ಕುರುಕ್ಷೇತ್ರ ಚಿತ್ರದ ಮೇಲೆ ಪರಿಣಾಮ ಬೀರದಿರುತ್ತಾ ಅನ್ನೋದು ಮುನಿರತ್ನ ಚಿಂತೆಗೆ ಕಾರಣ.

ಇನ್ನಷ್ಟೇ ಕುರುಕ್ರೇತ್ರ ಚಿತ್ರದ ಪ್ರಚಾರ ಕಾರ್ಯ ಆರಂಭವಾಗಬೇಕಿದೆ. ಇದರಲ್ಲಿ ದರ್ಶನ್ ಮತ್ತು ನಿಖಿಲ್ ಒಂದೇ ವೇದಿಕೆಯಲ್ಲಿ ಮತ್ತೆ ಮುಖಾಮುಖಿಯಾಗಬಹುದಾ ಎಂಬುದರ ಬಗ್ಗೆಯೇ ಮುನಿರತ್ನರಿಗೆ ಸಂಶಯವಿದ್ದಂತಿದೆ. ಆದ್ದರಿಂದಲೇ ಅವರು ಯಾವ ಕಿಸುರೂ ಇಲ್ಲದೇ ಈ ಲೋಕಸಭಾ ಚುನಾವಣೆ ಮುಗಿದು ಕುರುಕ್ಷೇತ್ರ ಬಿಡುಗಡೆ ಸರಾಗವಾಗಲಿ ಅನ್ನೋ ಮನಸ್ಥಿತಿಯಲ್ಲಿರುವಂತಿದೆ. ಒಂದು ವೇಳೆ ದರ್ಶನ್ ಮತ್ತು ನಿಖಿಲ್ ನಡುವೆಯೂ ವೈಯಕ್ತಿಕ ಕಾಳಗ ಆರಂಭವಾದರೆ ಅದರ ಪರಿಣಾಮ ಕುರುಕ್ಷೇತ್ರ ಚಿತ್ರದ ಮೇಲಾಗಲಿದೆ ಅನ್ನೋದನ್ನು ತಳ್ಳಿ ಹಾಕುವಂತಿಲ್ಲ.

ಇನ್ನಷ್ಟು ಓದಿರಿ

Scroll to Top