ರೈಲಿನ ತುಂಬಾ ‘ತೋತಾಪುರಿ’ ಘಮಲು!

Picture of Cinibuzz

Cinibuzz

Bureau Report

ನವರಸ ನಾಯಕ ಜಗ್ಗೇಶ್ ಅಭಿನಯದ ‘ತೋತಾಪುರಿ’ ಮೊದಲ ಭಾಗ ಸೆಪ್ಟೆಂಬರ್ 30 ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಜನರಿಗೆ ವಿಷಯ ತಲುಪಿಸಲು ವಿಭಿನ್ನ ಪ್ರಚಾರ ಕಾರ್ಯ ಹಮ್ಮಿಕೊಂಡಿರುವ ಚಿತ್ರತಂಡ, ಬಸ್ಸು, ಆಟೋ, ಮೆಟ್ರೋ ಹಾಗೂ ಮಾಲ್ ಮುಂತಾದೆಡೆ ಭರ್ಜರಿಯಾಗಿ ಸದ್ದು ಮಾಡಿದೆ. ಇದೀಗ ಒಂದು ಹೆಜ್ಜೆ ಮುಂದಕ್ಕೆ ಇಟ್ಟು ಗಮನ ಸೆಳೆದಿದೆ ಟೀಂ ತೋತಾಪುರಿ.

ರೈಲಿನಲ್ಲಿ ಪ್ರಚಾರ ಕಾರ್ಯ ಹಮ್ಮಿಕೊಂಡ ಚಿತ್ರತಂಡ, ವಿನೂತನವಾಗಿ ಎಲ್ಲರ ಗಮನ ಸೆಳೆದಿದೆ. ರೈಲಿನ ಭೋಗಿಗಳಿಗೆಲ್ಲಾ ತೋತಾಪುರಿ ಥರೇವಾರಿ ಪೋಸ್ಟರ್ ವಿನ್ಯಾಸ ಮಾಡಿಸಿ ರಂಗುಗೊಳಿಸುವುದರ ಜತೆಗೆ ಬೆಂಗಳೂರಿನಿಂದ ಮೈಸೂರಿನವರೆಗೆ ಮಾಧ್ಯಮ ಮಿತ್ರರೊಂದಿಗೆ ಸಂದರ್ಶನ ಹಾಗೂ ಮಾತುಕತೆ ಮೂಲಕ ಪ್ರಯಾಣ ಮಾಡಿದ್ದು ಚಂದನವನದಲ್ಲಿ ಇದೇ ಮೊದಲು. ಹಾಗೆಯೇ ದಸರಾ ಸೊಬಗು ಮೈತುಂಬಿಕೊಂಡಿರುವ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿ ದರ್ಶನ ಮಾಡಿಕೊಂಡು ಬೆಂಗಳೂರಿಗೆ ವಾಪಾಸ್ಸಾಗಿದೆ ಚಿತ್ರತಂಡ. ವಿಶೇಷವಾಗಿ ಅಲಂಕಾರಗೊಳಿಸಿದ್ದ ತೋತಾಪುರಿ ಬಸ್ ಮೂಲಕ ಚಿತ್ರತಂಡ ಹಾಗೂ ಮಾಧ್ಯಮದವರು ಪಯಣಿಸಿದ್ದು ಎಲ್ಲರಿಗೂ ಹೊಸ ಅನುಭವ.

ಬಾಗ್ಲು ತೆಗಿ ಮೇರಿ ಜಾನ್ ಹಾಗೂ ಟ್ರೇಲರ್ ಮೂಲಕ ಸಾಕಷ್ಟು ಗಮನ ಸೆಳೆದಿರುವ ಚಿತ್ರತಂಡ, ಇದೀಗ ವಿಭಿನ್ನ ಪ್ರಚಾರದ ಮೂಲಕ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ನೀರ್ ದೋಸೆ ಖ್ಯಾತಿಯ ವಿಜಯ ಪ್ರಸಾದ್ ತೋತಾಪುರಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದ್ದಾರೆ. ಮೋನಿಫ್ಲಿಕ್ಸ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಕೆ.ಎ.ಸುರೇಶ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಜಗ್ಗೇಶ್ ಜೋಡಿಯಾಗಿ ಅದಿತಿ ಪ್ರಭುದೇವ ಇದ್ದಾರೆ. ಡಾಲಿ ಧನಂಜಯ್ ಹಾಗೂ ಸುಮನ್ ರಂಗನಾಥ್ ಸಹ ಪ್ರಮುಖ ಪಾತ್ರದಲ್ಲಿರುವ ಈ ಚಿತ್ರದ ಉಳಿದ ತಾರಾಗಣದಲ್ಲಿ ದತ್ತಣ್ಣ, ವೀಣಾ ಸುಂದರ್, ಹೇಮಾದತ್ ಮೊದಲಾದವರಿದ್ದಾರೆ.

ಇನ್ನಷ್ಟು ಓದಿರಿ

Scroll to Top