ಅವನು ಪಕ್ಕಾ ಫ್ರಾಡು. ಸಿಕ್ಕಿದ್ದನ್ನೆಲ್ಲಾ ದೋಚುವುದು, ಅವರಿವರನ್ನು ಬೆದರಿಸಿ ವಸೂಲಿ ಮಾಡೋದೇ ಉದ್ಯೋಗವನ್ನಾಗಿಸಿಕೊಂಡವನು. ಅವನದ್ದೇ ಒಂದು ಗ್ಯಾಂಗು ಕಟ್ಟಿಕೊಂಡು ವಂಚಿಸಿಕೊಂಡು ಜೀವನ ನಡೆಸುತ್ತಿರುತ್ತಾನೆ. ಮಾರ್ಕೆಟ್ ಏರಿಯಾದಲ್ಲಿನ ಪಾಳು ಬಿದ್ದಂತಾ ಜಾಗವನ್ನೇ ಸೂರು ಮಾಡಿಕೊಂಡಿರುತ್ತಾನೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ಕಾರ್ಪೊರೇಟರ್ ರೆಡ್ಡಿಯ ದಗಲ್ಬಾಜಿ ಕೆಲಸಗಳಲ್ಲಿ ಭಾಗಿಯಾಗಿರುತ್ತಾನೆ. ಅವನು ಕೊಡುವ ಚಿಲ್ಲರೆ ಕಾಸಿಗೆ ದುಡಿಯುತ್ತಿರುತ್ತಾನೆ. ಇಂಥಾ ಖದೀಮನ ಮನಸ್ಸಿನಲ್ಲೂ ಅದೊಂದು ದಿನ ಪ್ರೀತಿಯ ಗಿಡ ಚಿಗುರಿತ್ತದೆ. ಇನ್ನೇನು ಅದು ಹೂ ಬಿಡುತ್ತಿದೆ ಅನ್ನೋ ಹೊತ್ತಿಗೆ ಹುಡುಗಿಗೆ ಇವನ ಅಸಲೀಯತ್ತು ಹೊತ್ತಾಗುತ್ತದೆ. ಇಷ್ಟೆಲ್ಲಾ ಆಗುವ ಹೊತ್ತಿಗೆ ಸಿನಿಮಾ ಅರ್ಧ ಭಾಗ ಕ್ರಮಿಸಿರುತ್ತದೆ.

ಒಂದು ಕಡೆ ಇಷ್ಟ ಪಟ್ಟ ಹುಡುಗಿ ಇವನ ಸಾವಾಸ ಬೇಡ ಅಂತಾ ದೂರಾಗುತ್ತಾಳೆ. ತನ್ನ ಹಾದಿ ಸರಿಯಿಲ್ಲ ಅನ್ನೋದನ್ನು ಅರಿತ ಹೀರೋ ಸೂರ್ಯ ಹೊಸ ದಾರಿಯಲ್ಲಿ ನಡೆಯುತ್ತಾನಾ? ಹಾಗೊಮ್ಮೆ ಅವನು ಬದಲಾಗುವ ನಿರ್ಧಾರ ಮಾಡಿದರೆ ಅವನ ಸುತ್ತಲಿನ ವ್ಯವಸ್ಥೆ ಹೇಗೆ ಪ್ರತಿಕ್ರಯಿಸುತ್ತದೆ? ತಾನು ಮಾಡುತ್ತಾ ಬಂದ ತಪ್ಪುಗಳನ್ನು ತಾನೇ ತಿದ್ದಿಕೊಳ್ಳಲು ಮುಂದಾದವನಿಗೆ ಎದುರಾಗುವ ಸವಾಲುಗಳೇನು? ಎಂಬಿತ್ಯಾದಿ ವಿವರಗಳ ಸುತ್ತ ಬೆಸೆದುಕೊಂಡ ಕತೆ ಖದೀಮ ಚಿತ್ರದ್ದು. ಇಲ್ಲಿ ನಿರ್ದೇಶಕರು ಹೀರೋ ಸೇರಿದಂತೆ ಅನೇಕ ಪಾತ್ರಗಳನ್ನು ಸೃಷ್ಟಿಸಿದ್ದಾರೆ. ದೊಡ್ಡ ಕ್ಯಾನ್ವಾಸನ್ನು ಅಯ್ಕೆ ಮಾಡಿಕೊಂಡು ಅದನ್ನು ಒಪ್ಪವಾಗಿ ಜೋಡಿಸಿದ್ದಾರೆ. ಯಾವ ಪಾತ್ರದ ಲೂಪ್ ಕೂಡಾ ಮಿಸ್ ಆಗದಂತೆ ಕೊನೆಯವರೆಗೂ ಎಚ್ಚರ ವಹಿಸಿದ್ದಾರೆ. ಇಷ್ಟು ಪಾತ್ರಗಳನ್ನು ಸೃಷ್ಟಿಸಿದಾಗ ನಿರ್ದೇಶಕನಾದವನು ದಿಕ್ಕು ತಪ್ಪುವ ಸಾಧ್ಯತೆ ಹೆಚ್ಚು. ಆದರೆ ಸಾಯಿ ಪ್ರದೀಪ್ ಎಲ್ಲೂ ಮೈ ಮರೆತಿಲ್ಲ. ಪ್ರತೀ ಪಾತ್ರ ಮತ್ತು ಪಾತ್ರಧಾರಿಗಳನ್ನು ಕತೆಗೆ ಪೂರಕವಾಗಿ ದುಡಿಸಿಕೊಂಡಿದ್ದಾರೆ.
ಹೀರೋ ಚಂದನ್ ಹೊಸದಾಗಿ ತೆರೆಗೆ ಪರಿಚಯವಾದರೂ ಅನುಭವಿಯಂತೆ ನಟನೆ, ಡ್ಯಾನ್ಸು, ಫೈಟು ಎಲ್ಲವನ್ನೂ ಶ್ರದ್ಧೆ ವಹಿಸಿ ನಿಭಾಯಿಸಿದ್ದಾರೆ. ಡೈಲಾಗ್ ಡೆಲಿವರಿಯಲ್ಲಿ ಕಮರ್ಷಿಯಲ್ ಹೀರೋ ಥರ ಅಬ್ಬರಿಸಿದ್ದಾರೆ. ಮೂಲತಃ ಜಿಮ್ ತರಬೇತುದಾರನಾಗಿರುವುದರಿಂದಲೋ ಏನೋ ಸಾಹಸ ದೃಶ್ಯಗಳಿಗೆ ಹೆಚ್ಚು ಎಫರ್ಟ್ ಹಾಕಿದ್ದಾರೆ. ಆ ಮೂಲಕ, ಯಾವುದೇ ಪಾತ್ರ ಕೊಟ್ಟರೂ ನಿಭಾಯಿಸಬಲ್ಲ ಎನ್ನುವಷ್ಟರ ಮಟ್ಟಿಗೆ ಭರವಸೆಯನ್ನೂ ಹುಟ್ಟುಹಾಕಿದ್ದಾರೆ. ನಾಯಕಿ ಅನುಷಾ ಕೃಷ್ಣ ಕನ್ನಡ ಚಿತ್ರರಂಗದಲ್ಲಿ ಒಂದೊಳ್ಳೆ ಜಾಗ ಗಿಟ್ಟಿಸಿಕೊಳ್ಳೋದರಲ್ಲಿ ಯಾವ ಅನುಮಾನವೂ ಇಲ್ಲ. ಅಷ್ಟು ಚೆಂದದ ನಟನೆ ಈ ಹುಡುಗಿಯದ್ದು. ಮೊದಲಿನಿಂದ ಕೊನೆತನಕ ಪ್ರತೀ ದೃಶ್ಯದಲ್ಲೂ ತನ್ನ ಅಮೋಘ ನಟನೆಯಿಂದ ಮನಸ್ಸಿಗೆ ಹತ್ತಿರವಾಗುತ್ತಾಳೆ. ಶೋಭರಾಜ್ ವಿಲನ್ ರೆಡ್ಡಿಯಾಗಿ ಅವತಾರವೆತ್ತಿದ್ದಾರೆ. ಇತ್ತೀಚಿನ ಅವರ ಸಿನಿಮಾಗಳಲ್ಲಿ ಇದು ಬೆಸ್ಟ್ ಅನ್ನಿಸಿಕೊಳ್ಳುತ್ತದೆ. ಮಿಮಿಕ್ರಿ ದಯಾನಂದ್ ಅವರ ಪಾತ್ರದ ಕಲ್ಪನೆ ಚೆನ್ನಾಗಿದೆ. ಮುಖ್ಯಮಂತ್ರಿ ಚಂದ್ರು, ಗಿರಿಜಾ ಲೋಕೇಶ್ ಅವರ ಪಾತ್ರಗಳೂ ಪ್ರಾಮುಖ್ಯತೆ ಹೊಂದಿವೆ. ಆಟೋ ನಾಗರಾಜ್, ಶಿವಕುಮಾರ್ ಆರಾಧ್ಯ ಮೊದಲಾದವರ ರೋಲು ಸಣ್ಣದಾಗಿದ್ದರೂ ಉತ್ತಮವಾಗಿವೆ.
ಇಷ್ಟು ದಿನ ಹಿನ್ನೆಲೆ ಗಾಯಕನಾಗಿ, ಸಂಗೀತ ನಿರ್ದೇಶಕನಾಗಿ ಹೆಸರು ಮಾಡಿದ್ದವರು ಶಶಾಂಕ್ ಶೇಷಗಿರಿ. ಅಚ್ಚರಿ ಎನ್ನುವಂತೆ ಶಶಾಂಕ್ ಇಲ್ಲಿ ವಿಚಿತ್ರ ಮತ್ತು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಶಾಂಕ್ ಯಾಕೆ ಇಷ್ಟು ದಿನ ನಟಿಸಲಿಲ್ಲ ಎನ್ನುವ ಪ್ರಶ್ನೆಯನ್ನೂ ಹುಟ್ಟು ಹಾಕಿದ್ದಾರೆ.
ಕಮರ್ಷಿಯಲ್ ಚೌಕಟ್ಟನ್ನು ಮೀರದಂತೆ ಸಿನಿಮಾ ಮಾಡಬೇಕು ಎನ್ನುವುದನ್ನೇ ಉದ್ದೇಶವನ್ನಾಗಿಸಿಕೊಂಡು ರೂಪಿಸಿರುವ ಚಿತ್ರ ಖದೀಮ. ಹೊಸ ನಿರ್ದೇಶಕ, ನಾಯಕ, ನಾಯಕಿ ಕೂಡಾ ಹೊಸಬರಾಗಿದ್ದರೂ ಅಂದುಕೊಂಡಿದ್ದನ್ನೆಲ್ಲಾ ಅಚ್ಚುಕಟ್ಟಾಗಿ ಪ್ರೆಸೆಂಟ್ ಮಾಡಿದ್ದಾರೆ ಅನ್ನೋದು ಸಮಾಧಾನದ ವಿಚಾರ. ಶಶಾಂಕ್ ಶೇಷಗಿರಿ ಹಿನ್ನೆಲೆ ಸಂಗೀತ ಚಿತ್ರದ ತೂಕವನ್ನು ಹೆಚ್ಚಿಸಿದೆ. ಕವಿರಾಜ್ ಬರೆದಿರುವ ʻಕಾದಿರಿಸು ಎಲ್ಲಾ ಕನಸುʼ ಹಾಡಿನ ಪದಪದವೂ ಮುದ್ದಾಗಿದೆ. ಒಟ್ಟಾರೆಯಾಗಿ ಎಲ್ಲ ರೀತಿಯಲ್ಲೂ ತೃಪ್ತಿಪಡಿಸುವ, ಇಷ್ಟವಾಗುವ ಸಿನಿಮಾ ಖದೀಮ