ಕಲರ್ಸ್ ಕನ್ನಡದ ಬಹು ನಿರೀಕ್ಷಿತ ಧಾರಾವಾಹಿ ‘ನಂದ ಗೋಕುಲ’ದ ಪ್ರೋಮೋ ಸದ್ದು ಮಾಡುತ್ತಿದೆ.
ಇತ್ತೀಚೆಗೆ ತನ್ನ ಸೋಶಿಯಲ್ ಮೀಡಿಯಾದ ಪುಟಗಳಲ್ಲಿ ಈ ಧಾರಾವಾಹಿಯ ಎರಡು ಪ್ರೋಮೋಗಳು ಬಂದಿದ್ದವು.
ಆದರೆ ಅವೆರಡರಿಗಿಂತ ಈ ಪ್ರೊಮೊ ಬಹಳ ಸದ್ದು ಮಾಡಿದೆ.ಅದೇ ಕಾರಣಕ್ಕೆ ವೈರಲ್ ಕೂಡಾ ಆಗಿದೆ.

‘ಪ್ರೀತಿಸಿ ಮದುವೆಯಾಗಕೂಡದು’ ಎಂದು ತಂದೆ ತನ್ನ ಮಕ್ಕಳ ಬಳಿ ‘ಭಾಷೆ’ ತೆಗೆದುಕೊಳ್ಳುವ ಸನ್ನಿವೇಶ ಇರೋ ಈ ಪ್ರೊಮೋದಲ್ಲಿ ಭಾವನಾತ್ಮಕ ಎಳೆ ಇದೆ. ಗಿರಿಜಾ ತನ್ನ ಗಂಡ ನಂದನ ಜೊತೆ ಮದುವೆಯಾಗಿ ೨೫ ವರ್ಷ ಆಗಿದೆ. ಈ ಸಮಯದಲ್ಲಿ ಅವರ ಮಗ ವಲ್ಲಭ ಅಭಿನಂದಿಸುತ್ತಾನೆ. ನಂದ, ಗಿರಿಜಾ ತಮ್ಮ ಮಕ್ಕಳ ಜೊತೆ ಹೊರ ಬಂದಾಗ ಎದುರುಗಡೆ ಮನೆಯಲ್ಲಿರೋ ಗಿರಿಜಾಳ ಸಹೋದರರು ಮುಖಾಮುಖಿಯಾಗುತ್ತಾರೆ. ಮಾತಿಗೆ ಮಾತು ಬೆಳೆದು ಅಲ್ಲಿ ಜಗಳವಾಗುತ್ತದೆ. ಆಗ ನಂದನಿಗೆ ಅಪಮಾನವಾಗುವಂತೆ ಗಿರಿಜಾಳ ಸಹೋದರ ಮಾತಾಡುತ್ತಾನೆ. ಮನೆಯ ಕೆಲಸ ಮಾಡಿಕೊಂಡಿದ್ದ ನಂದ ಅವರ ಒಪ್ಪಿಗೆಯಿಲ್ಲದೆ ಗಿರಿಜಾಳನ್ನು ಪ್ರೀತಿಸಿ ಮದುವೆಯಾದ ವಿಷಯ ಪ್ರಸ್ತಾಪವಾಗುತ್ತದೆ. ಆಗ ನಂದ ತನ್ನ ಮಕ್ಕಳಿಂದ, ‘ಯಾರೂ ಪ್ರೀತಿಸಿ ಮಾಡುವೆ ಆಗಕೂಡದು’ ಎಂದು ಪ್ರಮಾಣ ಮಾಡುವಂತೆ ತನ್ನ ಕೈ ಒಡ್ಡುತ್ತಾನೆ.

‘ನಂದ ಗೋಕುಲ’ ತಾರಾ ಬಳಗದಲ್ಲಿ ಅರವಿಂದ್ ರಾವ್, ಅಮೃತ ನಾಯ್ಡು, ರವಿ ಚೇತನ್, ಅರ್ಚನಾ ಗಾಯಕ್ವಾಡ್, ವಿಜಯ್ ಚಂದ್ರ, ಯಶವಂತ್, ಅಭಿಷೇಕ್ ದಾಸ್, ಕೃಷ್ಣಪ್ರಿಯಾ ಭಟ್, ರಘು ಮಂಡ್ಯ, ನವ್ಯ ಮುರಳಿ ಗೌಡ, ಮೇಘ, ಉರ್ಜಿತ, ಶೈಲಜಾ ಮುಂತಾದವರಿದ್ದಾರೆ. ಚಲನಚಿತ್ರಗಳಲ್ಲಿ ಮಿಂಚುತ್ತಿದ್ದ ಅರವಿಂದ್ ರಾವ್, ರವಿ ಚೇತನ್ “ನಂದ ಗೋಕುಲ’ ಧಾರಾವಾಹಿಯಲ್ಲಿ ಮೊದಲ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.