ಸೋಷಿಯಲ್ ಮೀಡಿಯಾಕ್ರೈಂ ಸುತ್ತ ಇವನೇ ಶ್ರೀನಿವಾಸ

Picture of Cinibuzz

Cinibuzz

Bureau Report

ಇವನೇ ಶ್ರೀನಿವಾಸನಿಗೆ ವಿಷ್ ಮಾಡಿದ ಹ್ಯಾಟ್ರಿಕ್ ಹೀರೋ

ಶ್ರೀನಿವಾಸ ಸರಣಿಯಲ್ಲಿ ಹಲವಾರು ಚಲನಚಿತ್ರಗಳು ತೆರೆಕಂಡಿವೆ.
‘ಇವನೇ ಶ್ರೀನಿವಾಸ’ ಅದಕ್ಕೆ ಹೊಸ ಸೇರ್ಪಡೆ. ಪ್ರತಿಭೆ, ಆಸಕ್ತಿ ಇದ್ದರೆ ಎಲ್ಲರೂ ಚಿತ್ರ ಮಾಡಬಹುದು ಎನ್ನುವುದಕ್ಕೆ ಈ ಚಿತ್ರವೇ ಸಾಕ್ಷಿ. ಬಿಬಿಎಂಪಿ ಯಲ್ಲಿ ಆಟೋ ಡ್ರೈವರ್ ಅಂದರೆ ಪೌರಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ಪ್ರತಾಪ್ ಗೆ ಮೊದಲಿಂದಲೂ ಅಭಿನಯ ಎಂದರೆ ಅತೀವ ಆಸಕ್ತಿ. ಮನೆಯವರೆಲ್ಲರ ಸಹಕಾರದಿಂದ ತೆರೆಮೇಲೆ ನಾಯಕನಾಗಿ ಕಾಣಿಸಿಕೊಳ್ಳಬೇಕೆಂಬ ಆಸೆಯನ್ನು ಈಡೇರಿಸಿಕೊಂಡಿದ್ದಾರೆ. ಇವನೇ ಶ್ರೀನಿವಾಸನಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಚಿತ್ರಕ್ಕೆ ಎಸ್.ಕುಮಾರ್ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಟೀಸರ್ ರಿಲೀಸ್ ಹಾಗೂ ಪತ್ರಿಕಾಗೋಷ್ಟಿ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಹ್ಯಾಟ್ರಿಕ್ ಹೀರೋ ಶಿವಣ್ಣ ಅವರು ಚಿತ್ರದ ಟೀಸರನ್ನು ಲಾಂಚ್ ಮಾಡಿ ಶುಭ ಹಾರೈಸಿದ ವಿಡಿಯೋ ತುಣುಕನ್ನು ಪ್ರದರ್ಶಿಸಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಕುಮಾರ್ ಸೋಷಿಯಲ್ ಮೀಡಿಯಾದಿಂದ ಏನೇನೆಲ್ಲ ತೊಂದರೆ ಆಗುತ್ತಿದೆ ಅನ್ನೋದನ್ನು ಈ ಚಿತ್ರದಲ್ಲಿ ಹೇಳಿದ್ದೇವೆ. ಬೆಂಗಳೂರು,‌ ಮೈಸೂರು, ಕೋಲಾರ, ತುಮಕೂರು ಸುತ್ತಮುತ್ತ ಚಿತ್ರೀಕರಣ ನಡೆಸಿದ್ದೇವೆ. ಪ್ರತಾಪ್ ನಾಯಕನಾಗಿ ನಟಿಸುವ ಜತೆಗೆ ನಿರ್ಮಾಣ ಸಹ ಮಾಡಿದ್ದಾರೆ. ನಾಯಕಿಯಾಗಿ ಪ್ರಿಯಾ ಆರಾಧ್ಯ ನಟಿಸಿದ್ದಾರೆ. ರೋಹಿತ್ ಕುಮಾರ್ ಈ ಕಥೆ ಬರೆದಿದ್ದು, ನಾನು ಡೈಲಾಗ್ ರಚಿಸಿ ನಿರ್ದೇಶನ ಮಾಡಿದ್ದೇನೆ. ಪ್ರತಿದಿನ ಸಾಮಾಜಿಕ‌ ಜಾಲತಾಣಗಳ ಮೂಲಕ ನಡೆಯುತ್ತಿರುವ ಕ್ರೈಮ್, ವಂಚನೆಯ ಬಗ್ಗೆ ಇವನೇ ಶ್ರೀನಿವಾಸ ಚಿತ್ರದ ಮೂಲಕ ಹೇಳಹೊರಟಿದ್ದೇವೆ. ಮೋಹನ್ ಜುನೇಜಾ ಅವರು ನಟಿಸಿದ ಕೊನೆಯ ಚಿತ್ರವಿದು. ಚಿಲ್ಲರ್ ಮಂಜು, ಸುಶ್ಮಿತಾ ಉಳಿದ ಪಾತ್ರಗಳಲ್ಲಿದ್ದಾರೆ.


ನಮ್ಮ ವೈಯಕ್ತಿಕ ವಿಚಾರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಬಾರದು, ಇದರಿಂದ ನಮ್ಮ ಮಾಹಿತಿ ತಿಳಿದುಕೊಳ್ಳುವ ವಂಚಕರು ಹೇಗೆ ಕಿರುಕುಳ,ತೊಂದರೆ ನೀಡುತ್ತಾರೆ, ವೈಯಕ್ತಿಕ ವಿಚಾರ ನಮ್ಮಲ್ಲೇ ಇರಬೇಕು, ಅದನ್ನು ಜಾಲತಾಣದಲ್ಲಿ ಹಂಚಿಕೊಳ್ಳಬಾರದು ಎಂಬುದನ್ನು ಚಿತ್ರದ ಮೂಲಕ ಹೇಳಲು ಪ್ರಯತ್ನಿಸಿದ್ದೇವೆ. ಚಿತ್ರದಲ್ಲಿ 3 ಸಾಹಸ ದೃಶ್ಯಗಳು ಹಾಗೂ 3 ಹಾಡುಗಳಿದ್ದು ಹರ್ಷ ಕೋಗೂಡ್, ಶ್ರೀಹರಿ, ಸುಭಾಶ್ ಒಂದೊಂದು ಸಾಂಗ್ ಕಂಪೋಜ್ ಮಾಡಿದ್ದಾರೆ. ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು, ಜನವರಿಗೆ ರಿಲೀಸ್ ಮಾಡುವ ಪ್ಲಾನಿದೆ ಎಂದರು.


ನಾಯಕ ಪ್ರತಾಪ್ ಮಾತನಾಡಿ ನಾನೊಬ್ಬ ಪೌರ ಕಾರ್ಮಿಕ. ಹಿಂದೆ ಡ್ರಾಮಾದಲ್ಲಿ ಆ್ಯಕ್ಟ್ ಮಾಡ್ತಿದ್ದೆ. ಈ ಚಿತ್ರದ ನಾಯಕನಾಗಿ ನಟಿಸುವ ಮೂಲಕ ಚಿತ್ರರಂಗಕ್ಕೆ ಬಂದಿದ್ದೇನೆ. ಶ್ರೀನಿವಾಸ ಯಾರು, ಎನ್ನುವುದೇ ಈ ಚಿತ್ರದ ಕಾನ್ಸೆಪ್ಟ್.
ನಮ್ಮ ಸಿನಿಮಾದ ಮೂಲಕ ಸಮಾಜಕ್ಕೆ ಒಂದು ಮೆಸೇಜ್ ನೀಡಬೇಕೆನ್ನುವುದು ನಮ್ಮ ಉದ್ದೇಶ. ಸಿನಿಮಾಗೆ ಏನು ಬೇಕೋ ಅದನ್ನು ಕೊಟ್ಟಿದ್ದೇವೆ ಎಂದು ಹೇಳಿದರು.


ಮತ್ತೊಬ್ಬ ನಿರ್ಮಾಪಕ ನವೀನ್ ಕುಮಾರ್ ಹಿರಿಯೂರಿನವರು, ರಿಯಲ್ ಎಸ್ಟೇಟ್ ಉದ್ಯಮಿ, ನಮ್ಮ ಚಿತ್ರದ ಫಸ್ಟ್ ಲುಕ್ಕನ್ನು ಶಿವಣ್ಣ ರಿಲೀಸ್ ಮಾಡಿಕೊಟ್ಟರು. ಸಿನಿಮಾ ತುಂಬಾ ಚೆನ್ನಾಗಿ ಬಂದಿದ್ದು ಒಂದೊಳ್ಳೆ ಸಂದೇಶವಿದೆ ಎಂದರು. ಲಕ್ಷ್ಮಿ ನರಸಿಂಹಸ್ವಾಮಿ ಮೂವಿ ಮೇಕರ್ಸ್ ಹಾಗೂ ಎಲ್.ಎನ್.ಡಿ. ಕ್ರಿಯೇಶನ್ಸ್ ಮೂಲಕ ಪ್ರತಾಪ್ ಎನ್. ಹಾಗೂ ನವೀನ್ ಕುಮಾರ್ ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅರವಿಂದರಾಜ್ ಅವರ ಸಂಕಲನ, ಹರ್ಷ ಕೋಗೂಡ್, ಶ್ರೀಹರಿ, ಸುಭಾಶ್ ಅವರ ಸಂಗೀತ ಸಂಯೋಜನೆ,
ರಮೇಶ್ ರಂಜಿತ್ ಅವರ ಸಾಹಸ, ಮುಂಜಾನೆ ಮಂಜು ಛಾಯಾಗ್ರಹಣ ಈ ಚಿತ್ರಕ್ಕಿದೆ.

ಇನ್ನಷ್ಟು ಓದಿರಿ

Scroll to Top