ಪೊಲೀಸ್ ಕಸ್ಟಡಿಯಲ್ಲಿದ್ದರಂತೆ ಆರ್ ಜಿ ವಿ!

Picture of Cinibuzz

Cinibuzz

Bureau Report

ಹೆಸರಾಂತ ವಿವಾದಾತ್ಮಕ ನಿರ್ದೇಶಕರಾದ ರಾಮ್ ಗೋಪಾಲ್ ವರ್ಮ ಅವರು ಬಾಲಿವುಡ್, ಟಾಲಿವುಡ್, ಕಾಲಿವುಡ್, ಸ್ಯಾಂಡಲ್ ವುಡ್ ಸೇರಿದಂತೆ ಎಲ್ಲೆಲ್ಲೂ ಚಿರಪರಿಚಿತರಾದವರು. ಜತೆಗೆ ಬಹುತೇಕ ವಿವಾದಾತ್ಮಕ ವಿಷಯಗಳನ್ನಿಟ್ಟುಕೊಂಡೆ ಸಿನಿಮಾ ಮಾಡಿ ಒಂದು ಮಟ್ಟಿನ ಕ್ರೇಜ್ ಹುಟ್ಟಿಸುವ ಆರ್ ಜಿ ವಿ ಭಾರತದಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ, ಅವರ ವಿವಾದಾತ್ಮಕ ಸಿನಿಮಾ ಲಕ್ಷ್ಮೀಸ್ ಎನ್ ಟಿ ಆರ್ ಸಿನಿಮಾವನ್ನು ರಿಲೀಸ್ ಮಾಡುವ ತರಾತುರಿಯಲ್ಲಿದ್ದರು. ಅಲ್ಲದೇ ಆಂಧ್ರ ಪ್ರದೇಶವನ್ನು ಹೊರತುಪಡಿಸಿ, ಭಾರತದಾದ್ಯಂತ ಲಕ್ಷ್ಮೀಸ್ ಎನ್ ಟಿ ಆರ್ ಸಿನಿಮಾವನ್ನು ರಿಲೀಸ್ ಮಾಡಿದ್ದರು.  ಅಲ್ಲದೇ ಮೇ 1ರಂದು ಆಂಧ್ರ ಪ್ರದೇಶದಲ್ಲಿ ರಿಲೀಸ್ ಮಾಡಲು ಯೋಜಿಸಲಾಗಿತ್ತು.

ಸಿನಿಮಾ ಪೂರ್ವ ಪತ್ರಿಕಾಗೋಷ್ಠಿಯನ್ನು ವಿಜಯವಾಡದಲ್ಲಿ ಏರ್ಪಡಿಸಲಾಗಿತ್ತು. ರಾಮ್ ಗೋಪಾಲ್ ವರ್ಮ ಹೈದರಾಬಾದ್ ನಿಂದ ವಿಜಯವಾಡಕ್ಕೆ ಪ್ರಯಾಣವನ್ನು ಬೆಳೆಸಿದರು. ಆದರೆ ಆರ್ ಜಿ ವಿ ವಿಜಯವಾಡವನ್ನು ಪ್ರವೇಶಿಸುತ್ತಿದ್ದಂತೆ, ಆಂಧ್ರಪ್ರದೇಶದ ಪೊಲೀಸರು ಅವರನ್ನು ಕಸ್ಟಡಿಗೆ ತೆಗೆದುಕೊಂಡು, ವಿಜಯವಾಡವನ್ನು ಬಿಡಬೇಕೆಂದು ಆದೇಶಿಸಿದ್ದಾರೆ. ಈ ವಿಚಾರವಾಗಿ ಸಿಟ್ಟಿಗೆದ್ದ ರಾಮ್ ಗೋಪಾಲ್ ವರ್ಮ “ಆಂಧ್ರಪ್ರದೇಶದಲ್ಲಿ ಪ್ರಜಾಪ್ರಭುತ್ವ ಉಲ್ಲಂಘನೆಯಾಗುತ್ತಿದೆ. ಅಲ್ಲದೇ ಅಲ್ಲಿ ಸತ್ಯವನ್ನು ಹೇಳುವುದಕ್ಕೂ ಅವಕಾಶ ನೀಡುವುದಿಲ್ಲ” ಎಂದೂ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಆಂಧ್ರಪ್ರದೇಶಕ್ಕೆ ಹೋಗಲು ನಿರಾಕರಿಸಿದ ಸಲುವಾಗಿ ಅವರು ನಿರ್ವಹಿಸುವ ಎಲ್ಲ ಸಾಮಾಜಿಕ ಜಾಲಾತಾಣದ ಖಾತೆಗಳನ್ನು ನಿರ್ಬಂಧಿಸಿರುವುದಲ್ಲದೇ ಆರ್ ಜಿ ವಿ ಯಾರನ್ನು ಸಂಪರ್ಕಿಸದಂತೆಯೂ ತಡೆ ಹಿಡಿಯಲಾಗಿತ್ತು. ಆರ್ ಜಿ ವಿ ನಿರ್ದೇಶನದ ಲಕ್ಷ್ಮೀಸ್ ಎನ್ ಟಿ ಆರ್ ಸಿನಿಮಾವು ಎನ್.ಟಿ. ರಾಮರಾವ್ ಅವರ ಎರಡನೇ ಹೆಂಡತಿ ಲಕ್ಷ್ಮೀ ಅವರ ಬಯೋಪಿಕ್ ಆಗಿದ್ದು, ಈ ಸಿನಿಮಾ ಬಿಡುಗಡೆಗೆ ಆಂಧ್ರಪ್ರದೇಶದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಇನ್ನಷ್ಟು ಓದಿರಿ

Scroll to Top