ಬಂಡಿಮಾಂಕಾಳಮ್ಮನ ಗುಡಿಗೆ ಬರ್ತಾರೆ ಬಾಸ್!

Picture of Cinibuzz

Cinibuzz

Bureau Report

ಯಾವ ನಟನ ಮೊದಲ ಸಿನಿಮಾಗೇ ಅಭಿಮಾನಿಗಳು ಹುಟ್ಟಿಕೊಳ್ಳುತ್ತಾರೋ ಅಂಥವರು ಭವಿಷ್ಯದ ಸ್ಟಾರ್’ ಗಳಾಗ್ತಾರೆ ಅನ್ನೋದನ್ನು ಇತಿಹಾಸ ತೋರಿಸಿಕೊಟ್ಟಿದೆ. ಸಿಂಪಲ್ ಸುನಿ ನಿರ್ದೇಶನದಬಜಾರ್ ಸಿನಿಮಾದ ಮೂಲಕ ಹೀರೋ ಆಗಿ ಎಂಟ್ರಿ ಕೊಟ್ಟವರು ಧನ್ವೀರ್. ನಟಿಸಿದ ಮೊದಲ ಸಿನಿಮಾಗೇ ಧನ್ವೀರ್ ಅಪಾರ ಅಭಿಮಾನಿ ವರ್ಗವನ್ನು ಸೃಷ್ಟಿಸಿಕೊಂಡಿದ್ದಾರೆ. ಪಾರಿವಾಳಗಳನ್ನು ಪೋಶಿಸುವ ಶೋಕ್ದಾರನ ಪಾತ್ರದಲ್ಲಿ ಕಾಣಿಸಿಕೊಂಡು ಬಜ಼ಾರು ಸೃಷ್ಟಿಸಿಕೊಂಡ ಹೀರೋ ಇವರಾಗಿರುವುದರಿಂದ  ಜನ ಧನ್ವೀರ್’ಗೆ ಶೋಕ್ದಾರ ಅಂತಲೇ ಹೆಸರಿಟ್ಟುಬಿಟ್ಟಿದ್ದಾರೆ!

ಇಂಥಾ ಧನ್ವೀರ್ ಸಿನಿಮಾ ನಾಯಕ ನಟನಾಗೋಕೆ ಮುಂಚಿನಿಂದಲೂ ಡಿ ಬಾಸ್ ಫ್ಯಾನು. ಧನ್ವೀರ್ ಹೀರೋ ಆಗೋ ಹೊತ್ತಿನಲ್ಲಿ ಆಡಿಯೋ ಬಿಡುಗಡೆಯಿಂದ ಹಿಡಿದು ಸಿನಿಮಾ ರಿಲೀಸಿನ ತನಕ ಖುದ್ದು ಹಾಜರಾಗಿ ಕೈ ಹಿಡಿದು ನಡೆಸಿದ್ದರು ದರ್ಶನ್. ಈಗ ಧನ್ವೀರ್ ನಟನೆಯ ಎರಡನೇ ಸಿನಿಮಾಬಂಪರ್ ಚಿತ್ರದ  ಮುಹೂರ್ತಕ್ಕೆ ಬಂದು ಮೊದಲ ದೃಶ್ಯಕ್ಕೆ ಕ್ಲಾಪ್ ಕೂಡಾ ಮಾಡಲಿದ್ದಾರೆ ಚಾಲೆಂಜಿಂಗ್ ಸ್ಟಾರ್!

ಶ್ರೀ ಮುರಳಿ ನಟನೆಯಲ್ಲಿ ರಿಲೀಸಾದ ಭರಾಟೆ ಮತ್ತು ದರ್ಶನ್ ಅವರ ರಾಬರ್ಟ್ ಸಿನಿಮಾಗಳನ್ನು ನಿರ್ಮಿಸಿರುವವರು ಸುಪ್ರಿತ್. ಈಗ ಧನ್ವೀರ್ ನಟಿಸಲಿರುವ ಬಂಪರ್ ಸಿನಿಮಾವನ್ನು ಪ್ರೊಡ್ಯೂಸ್ ಮಾಡುತ್ತಿರುವವರೂ ಇವರೇ.

ಅಲೆಮಾರಿ ಸಿನಿಮಾದಿಂದ ನಿರ್ದೇಶನ ಆರಂಭಿಸಿ ನಂತರ ಡವ್, ಕಾಲೇಜ್ ಕುಮಾರ, ವಿಕ್ಟರಿ ಮತ್ತು ಇನ್ನೇನು ತೆರೆಗೆ ಬರಲಿರುವ ಬಿಚ್ಚುಗತ್ತಿ ಸಿನಿಮಾಗಳನ್ನು ನಿರ್ದೇಶಿಸಿ ಯಶಸ್ವಿ ನಿರ್ದೇಶಕ ಎನಿಸಿಕೊಂಡಿರುವ ಹರಿ ಸಂತೋಷ್ ಬಂಪರ್ ಚಿತ್ರವನ್ನು ಡೈರೆಕ್ಟ್ ಮಾಡುತ್ತಿದ್ದಾರೆ.

ಇದೇ ತಿಂಗಳ ಹನ್ನೆರಡನೇ ತಾರೀಖು ದರ್ಶನ್ ಅವರ ಒಡೆಯ ತೆರೆಗೆ ಬರುತ್ತಿದೆ. ಅದೇ ದಿನ ಗವೀಪುರದ ಬಂಡಿಮಹಾಕಾಳಿ ದೇವಸ್ಥಾನದಲ್ಲಿ ನಡೆಯಲಿರುವ ಬಂಪರ್ ಚಿತ್ರದ ಮುಹೂರ್ತ ಸಮಾರಂಭಕ್ಕೆ ಚಾಲೆಂಜಿಂಗ್ ಸ್ಟಾರ್ ಅತಿಥಿಯಾಗಿ ಆಗಮಿಸುತ್ತಿದ್ದಾರೆ. ಬಂಡಿಮಾಂಕಾಳಮ್ಮ ಅಂದರೆ ದರ್ಶನ್ ಪಾಲಿಗೆ ಆರಾಧ್ಯ ದೈವ. ದೇವಾಲಯಕ್ಕೆ ಆಗಾಗ ಭೇಟಿ ನೀಡುವ ದರ್ಶನ್ ತಾಯಿ ಬಂಡಿ ಮಹಾಕಾಳಿ ಎಂದರೆ ಅತೀವ ಭಕ್ತಿ ಹೊಂದಿದ್ದಾರೆ. ದೇವಾಲಯದ ಗೋಪುರಕ್ಕೆ ತಾವೇ ಖರ್ಚು ಮಾಡಿ ಬಣ್ಣ ಮಾಡಿಸಿದ್ದಾರೆ. ತಮ್ಮಿಷ್ಟದ ದೇಗುಲದಲ್ಲೇ ತಮ್ಮ ನೆಚ್ಚಿನ ಹುಡುಗನ ಮುಹೂರ್ತ ನೆರವೇರುತ್ತಿರುವುದು ದರ್ಶನ್ ಅವರ ಸಂತಸವನ್ನು ಹೆಚ್ಚಿಸಲಿದೆ ಅನ್ನೋದಂತೂ ನಿಜ!

ಇನ್ನಷ್ಟು ಓದಿರಿ

Scroll to Top