ಚೇತನ್ ಕುಮಾರ್ ನಿರ್ದೇಶನದಲ್ಲಿ, ಶ್ರೀಮುರಳಿ ಅಭಿನಯಿಸಿದ್ದ ಭರಾಟೆ ಸಿನಿಮಾ ತೆರೆಗೆ ಬಂದು ಗೆದ್ದಿದೆ. ಅದಾಗಲೇ ಚಿತ್ರ ಅಮೆಜ಼ಾನ್ ಪ್ರೈಮ್ನಲ್ಲೂ ಲಭ್ಯವಿದೆ. ಆದರೆ ಈ ಸಿನಿಮಾದ ಕುರಿತಾಗಿ ಹಿರಿಯ ನಟರೊಬ್ಬರ ಬೇಸರ ಮಾತ್ರ ತಣ್ಣಗಾಗಿಲ್ಲ!

ನಟ ಶ್ರೀ ಮುರಳಿ ಭರಾಟೆ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದರು. ಕೆನ್ನೆತುಂಬ ಬಿಳೀಗಡ್ಡ, ಮೈತುಂಬಾ ರೇಷ್ಮೆ ಪೋಷಾಕು, ಪೇಟ ಧರಿಸಿ, ಕೈಲೊಂದು ವಾಕಿಂಗ್ ಸ್ಟಿಕ್ ಕೂಡಾ ಹಿಡಿದುಕೊಂಡು ವಿಶೇಷ ಅವತಾರದಲ್ಲಿ, ಮಣ್ಣಿನ ಮಗ ರತ್ನಾಕರನ ಪಾತ್ರದಲ್ಲಿ ಅಮೋಘವಾಗಿ ನಟಿಸಿದ್ದ ಪಾತ್ರಧಾರಿ ಶ್ರೀಮುರಳಿ ಅಂತಾ ಸಿನಿಮಾ ಪೂರ್ತಿ ನೋಡಿದ ಮೇಲೂ ಸಾಕಷ್ಟು ಜನರಿಗೆ ಗೊತ್ತೇ ಆಗಿರಲಿಲ್ಲ!

ಅಸಲಿಗೆ ಈ ಪಾತ್ರವನ್ನು ಹಿರಿಯ ನಟ ಶ್ರೀನಿವಾಸ ಮೂರ್ತಿಯವರು ನಿಭಾಯಿಸಬೇಕಿತ್ತಂತೆ. ಎಲ್ಲ ಮಾತುಕತೆಗಳೂ ಮುಗಿದು ಹನ್ನೆರಡು ದಿನಗಳ ಕಾಲ್ ಶೀಟ್ ಕೂಡಾ ನೀಡಿದ್ದರಂತೆ. ಕೊಟ್ಟ ಡೇಟು ಹತ್ತಿರವಾದಾಗಲೂ ಚಿತ್ರತಂಡದಿಂದ ಯಾವುದೇ ರೀತಿಯ ಕರೆ ಬರಲಿಲ್ಲವಂತೆ. ಬಹುಶಃ ಚಿತ್ರೀಕರಣ ಮುಂದಕ್ಕೆ ಹೋಗಿರಬೇಕು. ಒತ್ತಡದ ನಡುವೆ ತಿಳಿಸಲಾಗಿಲ್ಲವೇನೋ ಅಂದುಕೊಂಡು ಮೂರ್ತಿಗಳು ಸುಮ್ಮನೇ ಕಾದುಕುಳಿತಿದ್ದರಂತೆ. ಮೊದಲೇ ದಿನಾಂಕ ನಿಗಧಿಯಾಗಿದ್ದರಿಂದ ಶ್ರೀನಿವಾಸ ಮೂರ್ತಿಯವರು ಬೇರೆ ಸಿನಿಮಾವನ್ನೂ ಒಪ್ಪಿಕೊಂಡಿರಲಿಲ್ಲ. ಏನೋ ಯಡವಟ್ಟಾಗಿರಬೇಕು, ನನ್ನ ಪಾತ್ರವನ್ನೇ ತೆಗೆದಿರಬಹುದು. ಅದಕ್ಕೇ ಚಿತ್ರತಂಡದವರು ಸಂಪರ್ಕಿಸಿಲ್ಲ. ಅಂತಾ ಮೂರ್ತಿ ಸರ್ ತಮಗೆ ತಾವೇ ಸಮಾಧಾನ ಮಾಡಿಕೊಂಡು ಸುಮ್ಮನಾಗಿದ್ದಾರೆ. ಕಡೆಗೆ ಸಿನಿಮಾ ತೆರೆಗೆ ಬಂದಮೇಲೆ ಗೊತ್ತಾಗಿದೆ ಪಾತ್ರವೇನೂ ಕಟ್ ಆಗಿಲ್ಲ. ಬದಲಿಗೆ ತಮ್ಮನ್ನು ಕಟ್ ಮಾಡಿ ಆ ಪಾತ್ರವನ್ನು ಸ್ವತಃ ಹೀರೋ ಶ್ರೀ ಮುರಳಿ ನಿಭಾಯಿಸಿದ್ದಾರೆ ಅನ್ನೋದು ಮೂರ್ತಿಯವರಿಗೆ ತಿಳಿದಿದೆ!

ತಾನೊಬ್ಬ ಹಿರಿಯ ನಟ. ಕಡೇಪಕ್ಷ ನಿಮ್ಮ ಪಾತ್ರವನ್ನು ಮುರಳಿಯವರೇ ನಿರ್ವಹಿಸುತ್ತಾರೆ. ನೀವು ಬೇರೆ ಸಿನಿಮಾಕ್ಕಾದರೂ ಡೇಟು ಕೊಟ್ಟುಬಿಡಿ ಅಂತಾ ಹೇಳಬಹುದಿತ್ತು. ನಮಗೂ ಬದುಕು, ಅಗತ್ಯಗಳಿರುತ್ತವೆ. ನನ್ನನ್ನು ಸುಖಾಸುಮ್ಮನೆ ಹನ್ನೆರಡು ದಿನಗಳ ಕಾಲ ನಿರುದ್ಯೋಗಿಯನ್ನಾಗಿಸಿ ಮನೇಲಿ ಕೂರಿಸಿದರು. ಸೌಜನ್ಯಕ್ಕಾದರೂ ನನ್ನ ಗಮನಕ್ಕೆ ತರುವ ಪ್ರಯತ್ನವನ್ನು ಭರಾಟೆ ಸಿನಿಮಾತಂಡ ಮಾಡಲಿಲ್ಲ ಅನ್ನೋದೀಗ ಹಿರಿಯರೂ, ಗೌರವಾನ್ವಿತ ನಟರಾದ ಶ್ರೀಯುತ ಶ್ರೀನಿವಾಸ ಮೂರ್ತಿಗಳ ಮನೋವೇದನೆಗೆ ಕಾರಣವಾಗಿದೆ. ಈ ವಿಚಾರವನ್ನು ತಮ್ಮ ಆತ್ಮೀಯರ ಬಳಿ ಹೇಳಿಕೊಂಡು ನಿರಾಳರಾಗುವ ಪರಿಸ್ಥಿತಿ ಅವರಿಗೆ ಬಂದೊದಗಿದೆ.
ಶ್ರೀಮುರಳಿಯವರೇ ನೀವು ಹೀಗೆಲ್ಲಾ ಮಾಡಿದ್ದು ಸರೀನಾ? ಹಿರಿಯ ನಟರೊಬ್ಬರ ಕೆಲಸ ಕಿತ್ತುಕೊಂಡಿದ್ದೂ ಅಲ್ಲದೆ, ಅವರಿಗೆ ನಷ್ಟ ಮಾಡಬೇಕಿತ್ತಾ? ಆನ್ಸರ್ ಮಾಡಿ ಪಾಂಡುರಂಗಾ…!!











































