ಸಾರ್ವಜನಿಕರಿಗೆ ಖಡಕ್ ವಾರ್ನಿಂಗ್…!

Picture of Cinibuzz

Cinibuzz

Bureau Report

ಕನ್ನಡ ಚಿತ್ರರಂಗದಲ್ಲಿ ಆಪರೇಷನ್ ಅಲಮೇಲಮ್ಮ ಮತ್ತು ಕವಲುದಾರಿ ಸಿನಿಮಾಗಳ ಮೂಲಕ ಸಡನ್ನಾಗಿ ಎಂಟ್ರಿ ಕೊಟ್ಟು ಭರವಸೆ ಹುಟ್ಟಿಸಿರುವ ನಟ ರಿಷಿ. ಯಾವುದೇ ಮುನ್ಸೂಚನೆ ಇಲ್ಲದೆ ಬಿಡುಗಡೆಯಾಗಿದ್ದೂ ಅಲ್ಲದೆ ದೊಡ್ಡ ಮಟ್ಟದಲ್ಲಿ ಸೌಂಡು ಮಾಡಿ, ಹೊಸ ಪ್ರೇಕ್ಷಕರನ್ನು ಹುಟ್ಟು ಹಾಕಿದ ಹೆಗ್ಗಳಿಕೆ ಗುಳ್ಟು ಚಿತ್ರದ್ದು. ಹೀಗೆ ಸದ್ದಿಲ್ಲದೆ ಬಂದು ತಮ್ಮ ತನವನ್ನು ಸಾಬೀತು ಮಾಡಿದವರೆಲ್ಲಾ ಈಗ ಒಟ್ಟಾಗಿ ಸೇರಿ ಸೃಷ್ಟಿಸಿರುವ ಸಿನಿಮಾ ಸಾರ್ವಜನಿಕರಿಗೆ ಸುವರ್ಣಾವಕಾಶ.  ಈ ಚಿತ್ರದ ನಿರ್ಮಾಪಕರು, ತಂತ್ರಜ್ಞರು ಮತ್ತು ಕಲಾವಿದರ ಅಭಿಪ್ರಾಯಗಳು ಇಲ್ಲಿ ಪ್ರಕಟಗೊಳ್ಳಲಿದೆ. ಅದರ ಮೊದಲ ಭಾಗವಾಗಿ ನಿರ್ಮಾಪಕರಲ್ಲೊಬ್ಬರಾದ ಪ್ರಶಾಂತ್ ರೆಡ್ಡಿ ಅವರ ಒಂದಿಷ್ಟು ಅನಿಸಿಕೆಗಳು ಇಲ್ಲಿ ದಾಖಲಾಗಿದೆ…

ತೀರಾ ಹೊಸದೆನ್ನುವ ಶೀರ್ಷಿಕೆಯನ್ನೇ ಸಿನಿಮಾ ಮಾಡಿ, ಎಲ್ಲರೂ ಮೆಚ್ಚುವಂತಾ ರೀತಿಯಲ್ಲಿ ‘ಗುಳ್ಟುವನ್ನು ರೂಪಿಸಿದ್ದ ತಂಡ ಅದ್ಭುತ ಗೆಲುವು ದಾಖಲಿಸಿತ್ತು. ಆ ವರೆಗೆ ಕನ್ನಡ ಸಿನಿಮಾವನ್ನೇ ನೋಡಿದರೆ ಅನ್ಯಭಾಷಿಕರನ್ನೂ ಸೆಳೆದ ಚಿತ್ರವದು. ಹೀಗಾಗಿ ಗುಳ್ಟು ಕನ್ನಡಿಗರ ಹೆಮ್ಮೆಯ ಸಿನಿಮಾ ಅನ್ನಿಸಿಕೊಂಡಿತ್ತು. ಈಗ ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರವನ್ನು ದೇವರಾಜ ಆರ್., ಪ್ರಶಾಂತ್ ರೆಡ್ಡಿ ಎಸ್ ಮತ್ತು ಗುಳ್ಟು ಚಿತ್ರದ ನಿರ್ದೇಶಕ ಜನಾರ್ದನ್ ಚಿಕ್ಕಣ್ಣ ಸೇರಿ ನಿರ್ಮಿಸಿದ್ದಾರೆ. ಅನೂಪ್ ರಾಮಸ್ವಾಮಿ ಕಶ್ಯಪ್ ನಿರ್ದೇಶನ ಮಾಡಿದ್ದಾರೆ.

ಈ ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಪ್ರಶಾಂತ್ ರೆಡ್ಡಿ ಮೂಲತಃ ಸಾಫ್ಟ್ ವೇರ್ ಇಂಜಿನಿಯರ್. ಸಿನಿಮಾಗಳ ಬಗ್ಗೆ ಅತೀವವಾದ ಒಲವಿರಿಸಿಕೊಂಡಿದ್ದ ಪ್ರಶಾಂತ್ ನಿರ್ಮಿಸಿದ ಮೊದಲ ಸಿನಿಮಾ ಗುಳ್ಟು. ಪ್ರಶಾಂತ್ ಮತ್ತು ನಿರ್ದೇಶಕ ಜನಾರ್ದನ್ ಕ್ಲಾಸ್ಮೇಟುಗಳಾಗಿದ್ದವರು. ಹೀಗಾಗಿ ಗುಳ್ಟುಗೆ ಪ್ರಶಾಂತ್ ಕೈ ಜೋಡಿಸಿದ್ದರು. ಆ ಚಿತ್ರ ಅಂದುಕೊಂಡಿದ್ದಕ್ಕಿಂತಾ ಉತ್ತಮವಾಗಿ ಕೈ ಹಿಡಿದಿತ್ತು.   ಗುಳ್ಟು ವಿದ್ಯಾವಂತ ವಲಯವನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿತ್ತು. ಆ ನಂತರ ಮತ್ತೆ ಯಾವ ರೀತಿಯ ಸಿನಿಮಾ ಮಾಡುವುದು ಅನ್ನೋದರ ಬಗ್ಗೆ ಚಿಂತಿಸಿ, ಪ್ರೇಕ್ಷಕರ ಅಭಿಪ್ರಾಯಗಳನ್ನು ಸಂಗ್ರಹಿಸಿದ ನಂತರ ಶುರು ಮಾಡಿದ ಸಿನಿಮಾ  ಸಾರ್ವಜನಿಕರಿಗೆ ಸುವರ್ಣಾವಕಾಶ.

ಅದೊಂದು ದಿನ ಗುಳ್ಟು ಚಿತ್ರದ ನಿರ್ದೇಶಕ ಜನಾರ್ದನ್ ‘ಈ ಕಥೆ ಹೇಗಿದೆ? ಅಂತಾ ಹೇಳಿದಾಗ ಪ್ರಶಾಂತ್ ಮತ್ತು ಅವರ ತಂಡದ ಎಲ್ಲರಿಗೂ ಇಷ್ಟವಾಯಿತಂತೆ. ಈ ಬಾರಿ ಯಾವುದೇ ಒಂದು ವರ್ಗಕ್ಕೆ ಸೀಮಿತವಾಗದೆ, ಮನರಂಜನೆಯನ್ನು ಕೇಂದ್ರೀಕರಿಸಿ, ಪ್ರಮುಖವಾಗಿ ಫ್ಯಾಮಿಲಿ ಆಡಿಯನ್ಸ್ ಇಷ್ಟಪಡುವ ಚಿತ್ರ ಮಾಡಬೇಕು ಅನ್ನೋದು ಪ್ರಶಾಂತ್ ಅವರ ಬಯಕೆಯಾಗಿತ್ತು. ಅದಕ್ಕೆ ತಕ್ಕಂತೆ ಸಾರ್ವಜನಿಕರಿಗೆ ಸುವರ್ಣಾವಕಾಶ ಮೂಡಿಬಂದಿದೆ. “ಎಲ್ಲರಿಗೂ ಹಣದ ಅವಶ್ಯಕತೆ ಇದ್ದೇ ಇರುತ್ತದೆ. ತುಂಬಾ ಫಾಸ್ಟಾಗಿ ದುಡ್ಡು ಮಾಡಲು ಹೋಗಿ ಎಲ್ಲೆಲ್ಲೋ ಸಿಕ್ಕು ಒದ್ದಾಡುವಂತಾಗುತ್ತದೆ. ಅನ್ನೋದನ್ನು ತುಂಬಾ ರಂಜನೀಯವಾಗಿ ಈ ಚಿತ್ರದಲ್ಲಿ ಹೇಳಿದ್ದೇವೆ. ಎಲ್ಲೂ ಡಬಲ್ ಮೀನಿಂಗ್ ಡೈಲಾಗ್ ಬಳಸಿಲ್ಲ. ಮುಜುಗರ ಪಡುವಂತಾ ಅಂಶ ಚಿಟಿಕೆಯಷ್ಟೂ ಇಲ್ಲ. ಸಂಸಾರಸಮೇತರಾಗಿ ಕೂತು ನೋಡಿ, ಎಂಜಾಯ್ ಮಾಡುವ ಸಿನಿಮಾ ಸಾರ್ವಜನಿಕರಿಗೆ ಸುವರ್ಣಾವಕಾಶ. ಅನ್ನೋದು ಪ್ರಶಾಂತ್ ರೆಡ್ಡಿ ಅವರ ವಿವರಣೆ.

ಈ ಚಿತ್ರದ ಮೂಲಕ ಕನ್ನಡಿಗರಾಗಿದ್ದೂ ಪರಭಾಷೆ ಸಿನಿಮಾಗಳಲ್ಲಿ ನಟಿಸುತ್ತಿದ್ದ ಧನ್ಯ  ಬಾಲಕೃಷ್ಣ ಅವರಿಗೆ ನಾಯಕಿಯಾಗಿ ಅವಕಾಶ ನೀಡಲಾಗಿದೆ. ಈ ಹಿಂದಿನ ಸಿನಿಮಾಗಳಲ್ಲಿ ನಟ ರಿಷಿ ಅವರಿಗೆ ಡ್ಯಾನ್ಸ್ ಮಾಡುವ ಯೋಗ ಇರಲಿಲ್ಲ. ಈ ಚಿತ್ರದ ನಾಲ್ಕು ಹಾಡುಗಳಿಗೆ ರಿಷಿ ಅದ್ಭುತವಾಗಿ ಸ್ಟೆಪ್ಪು ಹಾಕಿದ್ದಾರೆ. ಈಗ ಬಿಡುಗಡೆಯಾಗಿರುವ ವಿಡಿಯೋ ಸಾಂಗನ್ನು ಜನ ಅಪಾರವಾಗಿ ಮೆಚ್ಚಿದ್ದಾರೆ ಕೂಡಾ..

ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರದಲ್ಲಿ ರಿಷಿ, ಧನ್ಯಾ ಬಾಲಕೃಷ್ಣಾ, ದತ್ತಣ್ಣ, ರಂಗಾಯಣ ರಘು, ಸಿದ್ದು ಮೂಲಿಮನಿ, ಪಾಪಾ ಪಾಂಡು ಶಾಲಿನಿ. ಮಿತ್ರ ಸೇರಿದಂತೆ ಹಲವರು ಮುಖ್ಯಭೂಮಿಕೆಯಲ್ಲಿದ್ದಾರೆ. ಈ ಚಿತ್ರಕ್ಕೆ ಮಿಥುನ್ ಮುಕುಂದನ್ ಅವರ ಸಂಗೀತ ನಿರ್ದೇಶನವಿದೆ.

ಇನ್ನಷ್ಟು ಓದಿರಿ

Scroll to Top