ಕಪ್ಪನೆಯ, ಕುಳ್ಳಗಿನ ವ್ಯಕ್ತಿ ಏರಿದ್ದು ಮಾತ್ರ ದೊಡ್ಡ ಎತ್ತರಕ್ಕೆ

Picture of Cinibuzz

Cinibuzz

Bureau Report

ಅದೊಂದು ದಿನ ಅಮೀರ್ ಖಾನ್ ತಮ್ಮ ಆಫೀಸಿಗೆ ಎಂಟ್ರಿ ಕೊಟ್ಟರು. ಮಾಸಲು ಮಾಸಲು ಬಟ್ಟೆ, ಹಳೇದೊಂದು ಚಪ್ಪಲಿ, ಕೈಗೆ ಐವತ್ತರವತ್ತು ರುಪಾಯಿಯ ವಾಚು ಕಟ್ಟಿಕೊಂಡಿದ್ದ, ಕಪ್ಪು ಬಣ್ಣದ, ಸಣ್ಣ ಎತ್ತರದ ಹುಡುಗನೊಬ್ಬ ಅಲ್ಲಿದ್ದ ನೋಟೀಸ್ ಬೋರ್ಡುಗಳನ್ನು, ಸಿನಿಮಾ ಪೋಸ್ಟರುಗಳನ್ನು ತದೇಕಚಿತ್ತದಿಂದ ನೋಡಿಕೊಂಡು ನಿಂತಿದ್ದ; ಎಷ್ಟೊತ್ತಾದರೂ ನೋಡುತ್ತಲೇ ಇದ್ದ. ಸಾಕಷ್ಟು ಹೊತ್ತು ಗಮನಿಸಿದ ಅಮೀರ್ ತಮ್ಮ ಸಹಾಯಕರನ್ನು ಕರೆದು, ’ಯಾರವನು? ಒಂದೇ ಸಮ ಪೋಸ್ಟರುಗಳನ್ನು ನೋಡಿಕೊಂಡು ನಿಂತಿದ್ದಾನಲ್ಲ?’ ಎಂದು ಪ್ರಶ್ನಿಸಿದರು. ಆಗ ಅಮೀರ್‌ಗೆ ಗೊತ್ತಾಯಿತು ಆತ ಸಾಮಾನ್ಯ ಹುಡುಗನಲ್ಲ ಸ್ವತಃ ತಾವೇ ಬರಲು ಹೇಳಿದ್ದ, ತಮಿಳಿನ ಸೂಪರ್ ಹಿಟ್ ಸಿನಿಮಾ ಘಜಿನಿಯ ಡೈರೆಕ್ಟರ್ ಎ.ಆರ್. ಮುರುಗದಾಸ್ ಅಂತಾ. ತಕ್ಷಣ ಅಮೀರ್ ಮುರುಗದಾಸ್ ನಿಂತ ಜಾಗಕ್ಕೇ ಓಡೋಡಿ ಬಂದು, ಪ್ರೀತಿಯಿಂದ ಅಪ್ಪಿಕೊಂಡು ಸ್ವಾಗತಿಸಿದ್ದರು.

ಹೌದು, ಮುರುಗದಾಸ್ ಇವತ್ತು ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಹೆಸರು ಮಾಡಿರುವ ನಿರ್ದೇಶಕ. ಬಾಲಿವುಡ್ ಸಿನಿಮಾಗಳನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ತಮಿಳಿನಲ್ಲಿ ಈತ ನಿರ್ದೇಶಿಸಿದ ಚಿತ್ರಗಳೆಲ್ಲಾ ಬಹುತೇಕ ಸೂಪರ್ ಹಿಟ್ ಆಗಿವೆ. ತೆಲುಗಿನ ಸ್ಟಾಲಿನ್ ಮತ್ತು ಸ್ಪೈಡರ್ ಸಹಾ ಮುರುಗದಾಸ್ ನಿದೇಶನದ ಸಿನಿಮಾಗಳೇ. ಆದರೆ ತೆಲುಗಿನಲ್ಲಿ ಮುರುಗದಾಸ್’ಗೆ ಸ್ಟಾರ್ ನಟರು ಸಿಕ್ಕರೂ, ಅಂತಾ ಹಿಟ್ ಚಿತ್ರಗಳನ್ನು ನೀಡಲು ಸಾಧ್ಯವಾಗಿಲ್ಲ.

ಒಂದು ಕಾಲದಲ್ಲಿ ತಮಿಳಿನ ನಿರ್ದೇಶಕ ವಸಂತ್ ಬಳಿ ಇಬ್ಬರು ಹುಡುಗರು ಸಹಾಯಕರಾಗಿದ್ದರು. ಎಸ್.ಜೆ. ಸೂರ್ಯ ಮತ್ತು ಎ.ಆರ್. ಮುರುಗದಾಸ್. ಆ ನಂತರ ಎಸ್.ಜೆ. ಸೂರ್ಯ ನಿರ್ದೇಶಕರಾದಾಗ ಮುರರುಗದಾಸ್ ರನ್ನು ತಮ್ಮ ಸಹ ನಿರ್ದೇಶಕರನ್ನಾಗಿ ನೇಮಿಸಿಕೊಂಡರು. ಅದೇ ಎಸ್.ಜೆ. ಸೂರ್ಯ ನಟ ಅಜಿತ್’ಗೆ ಪರಿಚಯಿಸಿ ‘ದೀನ’ ಚಿತ್ರದ ಮೂಲಕ ಮುರುಗದಾಸ್ ಡೈರೆಕ್ಟರ್ ಆಗುವಂತಾಯಿತು. ಆ ನಂತರ ರಮಣ, ಘಜಿನಿ, ಏಳಾಂ ಅರಿವು, ತುಪಾಕಿ, ಕತ್ತಿ, ಸರ್ಕಾರ್… ಹೀಗೆ ಮುರುಗದಾಸ್ ನಿರ್ದೇಶಿಸಿರುವ ಸಿನಿಮಾಗಳೆಲ್ಲಾ ಬಾಕ್ಸಾಫೀಸಿನಲ್ಲಿ ರೆಕಾರ್ಡ್ ಕ್ರಿಯೇಟ್ ಮಾಡುವಂತೆ ಕಲೆಕ್ಷನ್ ಕಂಡಿವೆ. ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್’ಗಳೆಲ್ಲಾ ಈತನ ನಿರ್ದೇಶನದಲ್ಲಿ ನಟಿಸುವ ಬಯಕೆ ಹೊಂದಿದ್ದಾರೆ. ಯಾವುದೇ ಗಾಸಿಪ್ಪಿಗೆ ಆಹಾರವಾಗದೆ, ತಮ್ಮ ಪಾಡಿಗೆ ತಾವು ಸಿನಿಮಾಗಳನ್ನು ನಿರ್ದೇಶಿಸುತ್ತಾ, ಗೆಲುವು ಕಂಡಿರುವ ಮುರುಗದಾಸ್ ಈಗ ರಜನಿಕಾಂತ್ ಅಭಿನಯದ ದರ್ಬಾರ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈಗ ತೆರೆಗೆ ಬಂದಿರುವ ದರ್ಬಾರ್ ಯಾವ ಲೆವೆಲ್ಲಿಗೆ ದಾಖಲೆ ನಿರ್ಮಿಸುತ್ತೆ ನೋಡಬೇಕು!

 

 

ಇನ್ನಷ್ಟು ಓದಿರಿ

Scroll to Top