ಕಾಲಾಂತಕನ ಕತೆ ಏನಿರಬಹುದು?

Picture of Cinibuzz

Cinibuzz

Bureau Report

ಕಗ್ಗತ್ತಲಿನ ಮಳೆಯಲ್ಲಿ ಹೆಜ್ಜೆಯ ಗುರುತುಗಳು ಕಾಣದೇ ಇರಬಹುದು ಆದರೆ ಕರ್ಮ, ಅಧರ್ಮದ ಗುರುತುಗಳು ಕಾಡ್ತಾನೇ ಇರ‍್ತವೆ… ದೇಹ ಮತ್ತು ದ್ವೇಷಗಳು ಬೇರೆ ಇರಬಹುದು, ಭಾವನೆಗಳು ಒಂದೇ ಆಗಿರ‍್ತವೆ…

ಹೌದಲ್ವಾ? ಎಷ್ಟು ಸತ್ಯದ ಸಾಲುಗಳಲ್ಲವಾ?

ಇದು ಕಾಲಾಂತಕ ಚಿತ್ರದ ಟೀಸರಿನ ಹಿನ್ನೆಲೆಯಲ್ಲಿ ಬಳಸಲಾಗಿರುವ ಮಾತು.

ಜ್ವಲಂತಂ ಎನ್ನುವ ಚಿತ್ರವೊಂದು ತೆರೆಗೆ ಬಂದಿದ್ದು ನೆನಪಿರಬಹುದು… ಅಂಬರೀಶ್ ಆ ಚಿತ್ರವನ್ನು ನಿರ್ದೇಶಿಸಿದ್ದರು. ಈಗ ಎರಡನೇ ಪ್ರಯತ್ನವಾಗಿ ಅಂಬರೀಶ್ ಕಾಲಾಂತಕ ಚಿತ್ರವನ್ನು ರೂಪಿಸಿದ್ದಾರೆ. ಈಗ ಸಿನಿಮಾದ ಟೀಸರ್ ಲೋಕಾರ್ಪಣೆಗೊಂಡಿದೆ. ಬಹುತೇಕ ಕತ್ತಲು, ಮಳೆ ಬೆಳಕಿನಲ್ಲಿ ಕಣ್ಣಿಗೆ ಕಟ್ಟುವಂತಾ ದೃಶ್ಯಗಳನ್ನು ಕಾಡುವ ಹಿನ್ನೆಲೆ ಮಾತುಗಳೊಂದಿಗೆ ತೆರೆದಿಟ್ಟಿದ್ದಾರೆ. ಟೀಸರಿನಲ್ಲಿ ಎಲ್ಲವನ್ನೂ ಹೇಳಲು ಸಾಧ್ಯವಾಗದಿದ್ದರೂ, ಏನೋ ಇದೆ ಅನ್ನುವ ಕುರುಹನ್ನಂತೂ ಖಂಡಿತಾ ಬಿಟ್ಟುಕೊಡಬಹುದು. ಕಾಲಾಂತಕ ಚಿತ್ರದ ಟೀಸರಿನಲ್ಲಿ ಅದು ಸಾಧ್ಯವಾಗಿದೆ. ಈ ಟೀಸರನ್ನು ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡುವಂತೆ ಮಾಡುತ್ತದೆ. ಜೊತೆಗೆ ಈ ಚಿತ್ರದಲ್ಲಿ ಏನೋ ಗಂಭೀರವಾದ ವಿಚಾರವಿದೆ ಅಂತ ಯಾರಿಗಾದರೂ ಅನ್ನಿಸದೇ ಇರಲಾರದು.

ಅಸಲಿಗೆ, ಕಾಲಾಂತಕ ಅನ್ನೋ ಪದದ ಅರ್ಥವೇನು ಅನ್ನೋದು ಬಹುತೇಕರ ಪ್ರಶ್ನೆಯಾಗಿರಬಹುದು. ಮಾರ್ಕಾಂಡೇಯ ಪುರಾಣದಲ್ಲಿ ಶಿವನನ್ನು ‘ಕಾಲಾಂತಕ’ ಎಂದು ಹೇಳಲಾಗಿದೆ. ಶಿವನನ್ನು ಸಂಬೋಧಿಸಲಾಗುವ ಅದೇ ಹೆಸರನ್ನು ಅಂಬರೀಶ್ ತಮ್ಮ ಸಿನಿಮಾದ ಶೀರ್ಷಿಕೆಯನ್ನಾಗಿಸಿದ್ದಾರೆ. ಔಟ್ ಅಂಡ್ ಔಟ್ ಸಸ್ಪೆನ್ಸ್-ಥ್ರಿಲ್ಲರ್ ಜಾನರಿನ ಕಾಲಾಂತಕ ಸಿನಿಮಾದ ಚಿತ್ರೀಕರಣ ಪೂರ್ತಿಯಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇನ್ನೇನು ತೆರೆಗೆ ಬರಲು ತಯಾರಾಗುತ್ತಿರುವ ಚಿತ್ರದ ಫಸ್ಟ್ ಲುಕ್ ಕೆಲವೇ ದಿನಗಳ ಹಿಂದೆ ರಿಲೀಸಾಗಿತ್ತು. ಈಗ ಟೀಸರ್ ಕೂಡಾ ಅನಾವರಣಗೊಂಡಿದೆ.

ಯಾರದ್ದೇ ಬದುಕಲ್ಲಾಗಲಿ, ಉದ್ದೇಶಪೂರ್ವಕವಲ್ಲದಿದ್ದರೂ, ಅರಿವಿಗೆ ಬಾರದೆಯೇ ಸಣ್ಣ ಪುಟ್ಟ ತಪ್ಪುಗಳು ಘಟಿಸಿಬಿಟ್ಟಿರುತ್ತದೆ. ಹಾಗೆ ತಿಳಿಯದೇ ಮಾಡಿದ ಪ್ರಮಾದಗಳಿಗೆ ಪ್ರಾಯಶ್ಚಿತ್ತ ಪಡುವ ಸಂದರ್ಭ ಕೂಡಾ ಎದುರಾಗುತ್ತದೆ. ಕಟ್ಟಕಡೆಯದಾಗಿ ಅದರಿಂದ ಏನೆಲ್ಲಾ ಪರಿಸ್ಥಿತಿ ಎದುರಾಗುತ್ತದೆ ಅನ್ನೋದೇ ಕಾಲಾಂತಕ ಚಿತ್ರದ ತಿರುಳು. ಈ ಸಿನಿಮಾವನ್ನು ನೋಡುತ್ತಿದ್ದಂತೇ ಪ್ರತಿಯೊಬ್ಬರಿಗೂ ಇದು ನನ್ನದೇ ಬದುಕಿನ ಕತೆಯಾ ಅನ್ನುವಂತೆ ಅಂಬರೀಶ್ ರೂಪಿಸಿದ್ದಾರೆ.

ಕರೆಕ್ಟಾಗಿ ಒಂದು ವರ್ಷಕ್ಕೆ ಮುಂಚೆ ಆರಂಭವಾದ ‘ಕಾಲಾಂತಕ’ ಚಿತ್ರವನ್ನು ಚಿಕ್ಕಮಗಳೂರು, ಬೆಂಗಳೂರು ಸುತ್ತಮುತ್ತ ಸುಮಾರು ೪೦ ದಿನಗಳ ಕಾಲ ಚಿತ್ರೀಕರಿಸಲಾಗಿದೆ. ಈ ಚಿತ್ರದಲ್ಲಿ ಕೆ.ಜಿ.ಎಫ್. ಸಿನಿಮಾದೊಳಗೆ ಯಶ್ ತಾಯಿಯ ಪಾತ್ರದಲ್ಲಿ ನಟಿಸಿದ್ದ ಅರ್ಚನಾ ಜೋಯಿಸ್, ಯಶ್ವಂತ್ ಶೆಟ್ಟಿ, ಕಾರ್ತಿಕ್ ಸಾಮಗ, ಸುಶ್ಮಿತಾ ಜೋಷಿ, ಶ್ರೀಧರ್, ಧರ್ಮೇಂದ್ರ ಅರಸ್, ಪ್ರಕಾಶ್, ಕಡ್ಡಿಪುಡಿ ಚಂದ್ರು ಮುಂತಾದವರ ತಾರಾಗಣವಿದೆ. ಹಾಲೇಶ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ, ಇರುವ ಒಂದು ಹಾಡಿಗೆ ಫಿನ್ನಿ ಕುರಿಯನ್ ಸಂಗೀತ ಸಂಯೋಜಿಸಿದ್ದಾರೆ. ಭಾಸ್ಕರ್ ಮೂವೀ ಲೈನ್ಸ್’ ಬ್ಯಾನರ್‌ನಲ್ಲಿ  ಶಾಂತಕುಮಾರ್  ನಿರ್ಮಾಣದ ಈ ಚಿತ್ರಕ್ಕೆ ಹರಿನಾಥ್ ಸಹ ನಿರ್ಮಾಪಕರಾಗಿದ್ದಾರೆ.

ನೋಡುಗರನ್ನು ಕಾಡುವಂತೆ ಕಟ್ಟಿಕೊಟ್ಟ ಸಿನಿಮಾಗಳು ಯಾವತ್ತೂ ಗೆಲುವು ಕಾಣುತ್ತವೆ. ಕಾಲಾಂತಕ ಕೂಡಾ ಅದೇ ಹಾದಿಯಲ್ಲಿದೆ…

ಇನ್ನಷ್ಟು ಓದಿರಿ

Scroll to Top