ಹಳ್ಳೀಲಿ ಹುಟ್ಟಿದೀವಿ… ಜೀವನಕ್ಕೆ ಬೇಕಿರುವ ಕೋರ್ಸು ಇಲ್ಲೇ ಇದೆ!

Picture of Cinibuzz

Cinibuzz

Bureau Report

– ಎಷ್ಟು ಸತ್ಯವಾದ ಮಾತಲ್ಲವಾ?

ಯಾವ್ಯಾವುದೋ ಕೋರ್ಸು, ಕೆಲಸ ಅಂತಾ ಜನ ಹಳ್ಳಿ ಬಿಟ್ಟು ಸಿಟಿ ಸೇರುತ್ತಾರೆ. ತಮ್ಮದಲ್ಲದ ಊರಲ್ಲಿ ತಮಗಲ್ಲದ ಬದುಕು ಸಾಗಿಸುತ್ತಾರೆ.  ‘ಹುಟ್ಟಿದ ಊರನು ಬಿಟ್ಟು ಬಂದ ಮೇಲೆ ಇನ್ನೇನು ಬಿಡೋದು ಬಾಕಿ ಇದೆ’ ಅಂತಾ ಯೋಗರಾಜ ಭಟ್ಟರು ಬರೆದಂತೆ ಎಲ್ಲವನ್ನೂ ತೊರೆದು ಆತ್ಮವೊಂದು ಕಡೆ, ದೇಹ ಇನ್ನೊಂದು ಕಡೆ ಎನ್ನುವ ಹಾಗೆ ಜೀವಿಸುತ್ತಿದ್ದಾರೆ. ಆದರೆ ಬದುಕಿಗೆ ಬೇಕಿರುವ ಕೋರ್ಸು ಇಲ್ಲೇ ಇದೆ ಅನ್ನೋದು ಆನೆಬಲ ಸಿನಿಮಾದ ಥೀಮು!

ಸೂನಗಹಳ್ಳಿ ರಾಜು ನಿರ್ದೇಶಿಸಿರುವ ಈ ಚಿತ್ರವನ್ನು ಎ.ವಿ. ವೇಣುಗೋಪಾಲ್ ಅಡಕಿಮಾರನಹಳ್ಳಿ ಅವರು ಜನತಾ ಟಾಕೀಸ್ ಬ್ಯಾನರಿನ ಮುಖಾಂತರ ನಿರ್ಮಿಸಿದ್ದಾರೆ. ಲೂಸಿಯ ಖ್ಯಾತಿಯ ಪೂರ್ಣ ಚಂದ್ರ ತೇಜಸ್ವಿ ಅವರು ಒಟ್ಟು ನಾಲ್ಕು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದು, ಯೋಗರಾಜ್ ಭಟ್ ಅವರು ಮೆಲೋಡಿ ಹಾಡಿಗೆ ಗೀತ ಸಾಹಿತ್ಯ ಒದಗಿಸಿದ್ದಾರೆ. ರಾಗಿ ಮುದ್ದೆ ಹಾಡಿಗೆ ಡಾ.ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದಾರೆ. ಕತೆ ಚಿತ್ರಕತೆ ಸಂಭಾಷಣೆ ಬರೆದು ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತಿರುವ ಸೂನಗಹಳ್ಳಿ ರಾಜು ಅವರು ಸ್ವತಃ ಮಳವಳ್ಳಿ ಜಾತ್ರೆಲಿ ಅನ್ನುವ ಗೀತೆ ರಚಿಸಿದ್ದಾರೆ. ಜೆ.ಟಿ.ಬೆಟ್ಟೆಗೌಡ ಅವರು ಛಾಯಾಗ್ರಹಣ ಮಾಡಿದ್ದು, ಬಿ.ಎಸ್ ಕೆಂಪರಾಜು ಅವರು ಸಂಕಲನ ಮಾಡಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ನಡೆದಿರುವ ಅನೇಕ ನೈಜ ಘಟನೆಗಳನ್ನೇ ಆಧಾರವಾಗಿಟ್ಟುಕೊಂಡು ಕತೆ ಹೆಣೆದು ಸಿನಿಮಾವನ್ನಗಿ ರೂಪಿಸಿದ್ದಾರೆ. ಸಾಗರ್ ನಾಯಕನಾಗಿರುವ ಈ ಚಿತ್ರದಲ್ಲಿ ರಕ್ಷಿತಾ, ಮಲ್ಲರಾಜು, ಚಿರಂಜೀವಿ, ಕಾಮಿಡಿ ಕಿಲಾಡಿಯ ಮುತ್ತುರಾಜು, ಗೌತಮ್, ಹರೀಶ್ ಶೆಟ್ಟಿ, ಕೀಲಾರ ಉದಯ್, ಶಂಭೂಗೌಡ, ಗೌರಮ್ಮಜ್ಜಿ, ರೂಪ, ಸುಮಿತ್ರಾ, ಕೊತ್ತತ್ತಿ ಮಂಜುಳಾ, ಪವಿತ್ರ, ಶ್ರೇಷ್ಠ, ದಿವಿ ಮುಂತಾದವರು ಪಾತ್ರ ನಿರ್ವಹಿಸಿದ್ದಾರೆ.

ಇದೇ ತಿಂಗಳ ೨೧ಕ್ಕೆ ಆನೆಬಲ ತೆರೆಗೆ ಬರುತ್ತಿದೆ. ಸದ್ಯ ಈ ಚಿತ್ರದ ಟ್ರೇಲರ್ ಅನಾವರಣಗೊಂಡಿದೆ. ನಿರ್ದೇಶಕರು ತಿಳಿಸಿದಂತೆ ರಾಗಿ ಮುದ್ದೆ ಸ್ಪರ್ಧೆ ಸಿನಿಮಾದ ಬಹುಮುಖ್ಯ ವಿಚಾರ ಎನ್ನುವ ಸೂಚನೆ ದೊರೆತಿದೆ. ಪಕ್ಕಾ ದೇಸೀ ಸೊಗಡಿನ ಈ ಸಿನಿಮಾ ಎಲ್ಲ ವರ್ಗವನ್ನೂ ಸೆಳೆಯುವ ಸಾಧ್ಯತೆಯೂ ದಟ್ಟವಾಗಿದೆ.

ಇನ್ನಷ್ಟು ಓದಿರಿ

Scroll to Top