ರವಿತೇಜ ಗೆಲ್ಲಬೇಕು…

Picture of Cinibuzz

Cinibuzz

Bureau Report

ರವಿತೇಜರಂಥಾ ಕ್ರಿಯಾಶೀಲ ಯುವಕರು ಚಿತ್ರರಂಗದಲ್ಲಿ ಉಳಿದು, ಬೆಳೆಯಬೇಕಾದರೆ ಅವರ ಪ್ರಯತ್ನಗಳು ಗೆಲುವು ಕಾಣಬೇಕು. ಸಾಗುತ ದೂರ ದೂರ ಸಿನಿಮಾ ಗೆದ್ದರೆ ರವಿತೇಜ ಇನ್ನೂ ಭಿನ್ನ ಬಗೆಯ ಕಲಾಕೃತಿಗಳನ್ನು ರೂಪಿಸಬಲ್ಲರು. ಈ ಕಾರಣಕ್ಕಾದರೂ ಸಾಗುತ ದೂರವನ್ನು ಜನ ಸ್ವೀಕರಿಸುವಂತಾಗಲಿ.
ಅದೇನೋ ಗೊತ್ತಿಲ್ಲ!

ಬಹುಮುಖ ಪ್ರತಿಭೆ ಅನ್ನಿಸಿಕೊಂಡವರೇ ಕೆಲವೊಮ್ಮೆ ಗೆಲುವಿಗಾಗಿ ಪರದಾಡಬೇಕಾದ ಪರಿಸ್ಥಿತಿ ಒದಗಿಬರುತ್ತದೆ. ತೀರಾ ಕಾಡಿಸಿ, ಬೇಡಿಸಿ ಕಡೆಗೊಂಡು ದಿನ ಅದು ದಕ್ಕುತ್ತದೆ. ಸಿನಿಮಾವನ್ನೇ ಉಸಿರಾಗಿಸಿಕೊಂಡು, ಹಗಲೂ ರಾತ್ರಿಯೆನ್ನದೇ ಅದನ್ನೇ ಧೇನಿಸುವ ಕೆಲವೇ ಮಂದಿಯಲ್ಲಿ ನಟ, ನಿರ್ದೇಶಕ ರವಿತೇಜ ಕೂಡಾ ಒಬ್ಬರು!

ಹಾಗೆ ನೋಡಿದರೆ ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಸಾಕಷ್ಟು ಜನ ಹೀರೋಗಳ ಸಿನಿಮಾ ನಿರ್ದೇಶಿಸುವ ಅವಕಾಶ ಯಾವತ್ತೋ ರವಿತೇಜ ಮುಂದಿತ್ತು. ಆದರೆ ಬದುಕಿಗಾಗಿ ಒಪ್ಪಿಕೊಂಡ ಧಾರಾವಾಹಿಗಳು ಅದಕ್ಕೆ ಅನುವು ಮಾಡಿಕೊಡಲಿಲ್ಲ. ಸೀರಿಯಲ್ಲುಗಳಿಂದ ದೂರಾದಮೇಲೆ ರವಿತೇಜ ನಿರ್ದೇಶಿಸಿದ ಸಿನಿಮಾ ಜಾತ್ರೆ. ಚಿತ್ರದ ಬಗ್ಗೆ ಒಳ್ಳೆ ಪ್ರತಿಕ್ರಿಯೆ ಬಂದರೂ, ಬಿಡುಗಡೆಯಾದ ಸಂದರ್ಭವೋ ಏನೋ ಹೇಳಿಕೊಳ್ಳುವಂತಾ ಕಲೆಕ್ಷನ್ ಮಾಡಲಿಲ್ಲ. ಹಾಗಂತ ಸಿನಿವಾವನ್ನೇ ನಂಬಿದ ಮಂದಿ ಸುಮ್ಮನೇ ಕೂರಲು ತಾನೆ ಹೇಗೆ ಸಾಧ್ಯ?

ಹೀಗಾಗಿ, ಮತ್ತೊಂದು ಪ್ರಯತ್ನವಾಗಿ ರವಿತೇಜ ಶುರು ಮಾಡಿದ ಸಿನಿಮಾ- ಸಾಗುತ ದೂರ ದೂರ. ಮಹೇಶ್, ದೀಕ್ಷಿತ್ ಶೆಟ್ಟಿ, ಅಪೇಕ್ಷಾ ಪುರೋಹಿತ್, ಜಾಹ್ನವಿ ಜ್ಯೋತಿ, ಉಷಾ ಬಂಢಾರಿ ಮುಂತಾದವರು ನಟಿಸಿರುವ ಈ ಚಿತ್ರ ಇದೇ ಫೆಬ್ರವರಿ ೧೪ರ ಪ್ರೇಮಿಗಳ ದಿನದಂದು ಬಿಡುಗಡೆಯಾಗುತ್ತಿದೆ. ಜಗತ್ತಿನಲ್ಲಿ ತಾಯಿಯನ್ನು ಪ್ರೀತಿಸದ ಜೀವ-ಜೀವಿಗಳೇ ಇಲ್ಲವೇನೋ. ಪ್ರೇಮಿಗಳ ದಿನದ ಕೊಡುಗೆಯಾಗಿ ಬರುತ್ತಿರುವ ಸಾಗುತ ದೂರ ದೂರದಲ್ಲಿ ತಾಯಿ ಮಮತೆಯೇ ಪ್ರಧಾನ ಅಂಶವಾಗಿರಲಿದೆ. ಈ ಚಿತ್ರಕ್ಕೆ ಬಂಡವಾಳ ಹೂಡಿರುವ ಅಮಿತ್ ಪೂಜಾರಿ ನಿರ್ಮಾಣ ಮಾಡಲು ಒಪ್ಪಿದ್ದೇ ಈ ಮದರ್ ಸೆಂಟಿಮೆಂಟಿನ ಕಾರಣಕ್ಕೆ.

ಸದ್ಯ ಸಾಗುತ ದೂರ ದೂರ ಚಿತ್ರದ ಟ್ರೇಲರ್ ಅನಾವರಣಗೊಂಡಿದೆ. ಈಗ ಬಿಡುಗಡೆಗೆ ತೀರಾ ಹತ್ತಿರದಲ್ಲೂ ಇದೆ. ಈ ವರ್ಷ ಬಿಡುಗಡೆಯಾಗಿರುವ ಸಿನಿಮಾಗಳಲ್ಲಿ ಅದಾಗಲೇ ಐದಾರು ಅತ್ಯುತ್ತಮ ಸಿನಿಮಾಗಳು ಬಂದಿವೆ. ಟ್ರೇಲರು ನೋಡಿದವರಿಗೆ ಸಾಗುತ ದೂರ ದೂರ ಕೂಡಾ ಅದೇ ಪಟ್ಟಿಗೆ ಸೇರ್ಪಡೆಯಾಗೋದರಲ್ಲಿ ಡೌಟಿಲ್ಲ ಅನ್ನಿಸಿದೆ.

ರವಿತೇಜರಂಥಾ ಕ್ರಿಯಾಶೀಲ ಯುವಕರು ಚಿತ್ರರಂಗದಲ್ಲಿ ಉಳಿದು, ಬೆಳೆಯಬೇಕಾದರೆ ಅವರ ಪ್ರಯತ್ನಗಳು ಗೆಲುವು ಕಾಣಬೇಕು. ಸಾಗುತ ದೂರ ದೂರ ಸಿನಿಮಾ ಗೆದ್ದರೆ ರವಿತೇಜ ಇನ್ನೂ ಭಿನ್ನ ಬಗೆಯ ಕಲಾಕೃತಿಗಳನ್ನು ರೂಪಿಸಬಲ್ಲರು. ಈ ಕಾರಣಕ್ಕಾದರೂ ಸಾಗುತ ದೂರವನ್ನು ಜನ ಸ್ವೀಕರಿಸುವಂತಾಗಲಿ.

ಇನ್ನಷ್ಟು ಓದಿರಿ

Scroll to Top