ಈ ಹಿಂದೆ ‘ತಾರಾಕಾಸುರ‘ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ವೈಭವ್ ನಾಯಕನಾಗಿ ನಟಿಸುತ್ತಿರುವ ದ್ವಿತೀಯ ಚಿತ್ರ ‘ಕೈಲಾಸ‘. ಈ ಚಿತ್ರಕ್ಕೆ ಕಾಸಿದ್ರೆ ಎಂಬ ಅಡಿಬರಹವಿದೆ. ‘ಕೈಲಾಸ‘ ಚಿತ್ರದ ಮುಹೂರ್ತ ಸಮಾರಂಭ ಕಳೆದ ಭಾನುವಾರ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಡಾಲಿ ಧನಂಜಯ್ ಚಿತ್ರದ ಪ್ರಥಮ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ನಟರಾದ ರಾಜವರ್ಧನ್, ವಿಕ್ಕಿ, ನಿರ್ದೇಶಕರಾದ ನಾಗಣ್ಣ, ಅಲೆಮಾರಿ ಸಂತು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಜೈರಾಜ್, ನಿರ್ಮಾಪಕ ರಮೇಶ್ ಯಾದವ್, ಕರಿಸುಬ್ಬು, ಉಮೇಶ್ ಬಣಕಾರ್ ಮುಂತಾದ ಚಿತ್ರರಂಗದ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

ಬದುಕಿನ ಅರ್ಥ ತಿಳಿದುಕೊಳ್ಳದ ಹುಡುಗನೊಬ್ಬನು, ಜವಬ್ದಾರಿ ಇರುವ ಹುಡುಗಿಯ ನಡುವೆ ಪ್ರೀತಿ ಶುರುವಾಗುತ್ತದೆ. ಆಕೆಯ ಮನಸ್ಸನ್ನು ಗೆಲ್ಲಲು ಆತ ಏನೇನು ಮಾಡುತ್ತಾನೆ?ಎಷ್ಟು ಕಷ್ಟ ಪಡುತ್ತಾನೆ?ಎಲ್ಲೆಲ್ಲಿ ಹೋಗುತ್ತಾನೆ. ಅಂತಿಮವಾಗಿ ಅವನ ಶ್ರಮಕ್ಕೆ ಫಲಿತಾಂಶ ಸಿಗುತ್ತಾದಾ ಎಂಬುದು ಚಿತ್ರದ ಕಥಾ ಹಂದರ. ಹನ್ನೆರಡು ವರ್ಷ ಟೆಕ್ಕಿಯಾಗಿ ಕೆಲಸ ಮಾಡಿರುವ ಬಳ್ಳಾರಿ ಮೂಲದ ನಾಗ್ ವೆಂಕಟ್ ಈ ಚಿತ್ರದ ನಿರ್ದೇಶಕರು. ಎರಡು ಕಿರುಚಿತ್ರಗಳನ್ನು ನಿರ್ದೇಶಿಸಿ, ವೆಬ್ ಸೀರೀಸ್ ನಿರ್ದೇಶನ ವಿಭಾಗದಲ್ಲಿ ಸಹಾಯಕರಾಗಿ ಅನುಭವ ಪಡೆದುಕೊಂಡಿದ್ದಾರೆ ನಾಗ್ ವೆಂಕಟ್.

ಬೆಂಗಳೂರು ಸುತ್ತಮುತ್ತ, ತೀರ್ಥಹಳ್ಳಿ, ಕೊಡಗು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಲಾಗಿದೆ. ಬಿಂದಾಸ್ ಹುಡುಗನಾಗಿ ’ತಾರಕಾಸುರ’ ಖ್ಯಾತಿಯ ವೈಭವ್ ನಾಯಕನಾಗಿ ಎರಡನೆ ಪ್ರಯತ್ನ. ಬದುಕಿನ ಮೌಲ್ಯಗಳ ಹೊಣೆ ಹೊತ್ತುಕೊಂಡ ಹುಡುಗಿ ಪಾತ್ರದಲ್ಲಿ ಮಂಗಳೂರಿನ ರಾಶಿ ಬಾಲಕೃಷ್ಣ ನಾಯಕಿಯಾಗಿ ಮೂರನೆ ಅವಕಾಶ. ಗೆಳಯನಾಗಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್, ಇವರೊಂದಿಗೆ ಇಪ್ಪತೈದು ಪಾತ್ರಗಳು ಬರಲಿದೆ. ಖಳನಟನಾಗಿ ತೆಲುಗಿನ ಪ್ರಸಿದ್ದ ನಟ ಅಭಿನಯಿಸುವ ಸಾದ್ಯತೆ ಇದ್ದು, ಒಂದು ಸುತ್ತಿನ ಚರ್ಚೆ ನಡೆಸಲಾಗಿದೆ. ನಾಲ್ಕು ಹಾಡುಗಳಿಗೆ ಆಶಿಕ್ ಅರುಣ್ ಸಂಗೀತವಿದೆ. ಛಾಯಾಗ್ರಹಣ ಟಾಲಿವುಡ್ನ ವಿನೋದ್ ರಾಜೇಂದ್ರನ್, ಸಂಕಲನ ತ್ಯಾಗು.ಎಂ, ಸಾಹಸ ಸ್ಟನ್ನರ್ ಸ್ಯಾಮ್. ಇಬ್ಬರು ಕಾಲಿವುಡ್ ಕಡೆಯವರು. ಅನಂತಪುರದ ಯುವ ಉದ್ಯಮಿ, ಶಿಕ್ಷಣ ಸಂಸ್ಥೆ ನಡೆಸುತ್ತಿರುವ ವಾಸಿಕ್ ಅಲ್ಸಾದ್ ಮಹದ್ ಪಿಕ್ಚರ್ಸ್ ಮೂಲಕ ಬಂಡವಾಳ ಹೂಡುತ್ತಿದ್ದಾರೆ.













































