ಅಂತಾರಾಷ್ಟ್ರೀಯ ಖ್ಯಾತಿಯ ಕ್ರಿಕೆಟ್ ಆಟಗಾರ ರಾಹುಲ್ ದ್ರಾವಿಡ್ ಅವರಿಗೆಂದೇ ‘ಶಿವಾಜಿ ಸುರತ್ಕಲ್’ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಚಿತ್ರವನ್ನು ನೋಡಿ ಥ್ರಿಲ್ ಆದ ದ್ರಾವಿಡ್ “ಈ ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ. ಅದರಲ್ಲೂ ಸಿನಿಮಾದ ಕ್ಲೈಮ್ಯಾಕ್ಸ್ ನನ್ನನ್ನು ಬೆರಗುಗೊಳಿಸಿತು. ಇವತ್ತಿನ ದಿನಕ್ಕೆ ಇಂಥ ಸಿನಿಮಾದ ಅಗತ್ಯವಿತ್ತು. ನೋಡಿದ ಪ್ರತಿಯೊಬ್ಬರಿಗೂ ಶಿವಾಜಿ ಸುರತ್ಕಲ್ ಇಷ್ಟವಾಗಲಿದೆ. ರಮೇಶ್ ಅರವಿಂದ್ ಅವರ ಅಭಿನಯ ನೋಡೋದೇ ಚೆಂದ. ಇಷ್ಟು ಪವರ್ ಫುಲ್ ಸಬ್ಜೆಕ್ಟನ್ನು ಸೃಷ್ಟಿಸಿರುವ ಆಕಾಶ್ ಶ್ರೀವತ್ಸ ಅವರನ್ನು ಅಭಿನಂದಿಸಲೇಬೇಕು. ಶಿವಾಜಿ ಸುರತ್ಕಲ್ ಸಿನಿಮಾ ಸೂಪರ್ ಹಿಟ್ ಆಗುತ್ತದೆ ಅನ್ನೋದರಲ್ಲಿ ಯಾವ ಅನುಮಾನವೂ ಇಲ್ಲ. ಇಂಥದ್ದೊಂದು ಸಿನಿಮಾ ನೋಡಿ ಅಂತಾ ಕ್ರಿಕೆಟ್ ಪ್ರೇಮಿಗಳಿಗೂ ಹೇಳಲು ಇಷ್ಟಪಡುತ್ತೇನೆ. ಮಾತ್ರವಲ್ಲ ಕನ್ನಡದಲ್ಲಿ ಇಂಥದ್ದೊಂದು ಸಿನಿಮಾ ಮೂಡಿಬಂದಿರುವುದು ನಿಜಕ್ಕೂ ನನಗೆ ಹೆಮ್ಮೆ ಎನಿಸುತ್ತದೆ.” ಎಂದಿದ್ದಾರೆ.

ಇಷ್ಟು ದಿನ ಸಿನಿಮಾ ಮಂದಿ ಕ್ರಿಕೆಟ್’ಗೆ ಪ್ರಚಾರ ನೀಡುತ್ತಿದ್ದರು. ಈಗ ರಾಹುಲ್ ದ್ರಾವಿಡ್ ಮುಖಾಂತರ ಕ್ರಿಕೆಟಿಗರೂ ಸಿನಿಮಾಗಳನ್ನು ಪ್ರೋತ್ಸಾಹಿಸಲು ಬಂದಿರುವುದು ನಿಜಕ್ಕೂ ಸ್ವಾಗತಾರ್ಹ. ಇವತ್ತು ಉತ್ತಮ ಸಿನಿಮಾಗಳನ್ನು ಬಿಡುಗಡೆಗೊಳಿಸಲು ಐಪಿಎಲ್, ವರ್ಲ್ಡ್ ಕಪ್ಪು ಮುಂತಾದ ಕ್ರಿಕೆಟ್ ಪಂದ್ಯಕ್ಕೆ ಹೆದರುವ ಪರಿಸ್ಥಿತಿ ಇದೆ. ಯಾವುದೇ ಪಂದ್ಯಗಳಿದ್ದರೂ, ಯಾರೇ ಆಟವಾಡಿದರೂ ಸಿನಿಮಾರಂಗಕ್ಕೆ ಅದು ಪೆಟ್ಟು ಕೊಡದ ಪರಿಸ್ಥಿತಿ ನಿರ್ಮಾಣವಾಗಬೇಕು. ದ್ರಾವಿಡ್ ರಂಥಾ ಆಟಗಾರರು ಸಿನಿಮಾಗಳನ್ನು ನೋಡಿ, ಪ್ರೋತ್ಸಾಹ ನೀಡಿದಾಗ ಅಂತಾ ಭಯ ದೂರವಾಗುತ್ತದೆ.

ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಲಾಂಚನದಲ್ಲಿ ರೇಖಾ.ಕೆ.ಎನ್ ಹಾಗೂ ಅನೂಪ್ ಗೌಡ ಅವರು ನಿರ್ಮಿಸಿರುವ, ನಟ ರಮೇಶ್ ಅರವಿಂದ್ ಅಭಿನಯದ ೧೦೧ನೇ ಚಿತ್ರ ‘ಶಿವಾಜಿ ಸುರತ್ಕಲ್‘ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಆಕಾಶ್ ಶ್ರೀವತ್ಸ ನಿರ್ದೇಶನದ ಈ ಚಿತ್ರಕ್ಕೆ ‘ದಿ ಕೇಸ್ ಆಫ಼್ ರಣಗಿರಿ‘ ಎಂಬ ಅಡಿಬರಹವಿದೆ. ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಗುರುಪ್ರಸಾದ್ ಛಾಯಾಗ್ರಹಣ, ಶ್ರೀಕಾಂತ್, ಆಕಾಶ್ ಶ್ರೀವತ್ಸ ಅವರ ಸಂಕಲನವಿದೆ. ಅಭಿಜಿತ್ ಹಾಗೂ ಆಕಾಶ್ ಶ್ರೀವತ್ಸ ಚಿತ್ರಕಥೆ ಬರೆದಿದ್ದು, ಹಾಡುಗಳನ್ನು ಜಯಂತ ಕಾಯ್ಕಿಣಿ ರಚಿಸಿದ್ದಾರೆ. ರಮೇಶ್ ಅರವಿಂದ್, ರಾಧಿಕಾ ನಾರಾಯಣ್, ಆರೋಹಿ ನಾರಾಯಣ್ ಮುಂತಾದವರು ‘ಶಿವಾಜಿ ಸುರತ್ಕಲ್’ ಚಿತ್ರದ ತಾರಾಬಳಗದಲ್ಲಿದ್ದಾರೆ.












































