ಯಾವುದೇ ಒಂದು ಸಿನಿಮಾ ರಿಲೀಸಾದಾಗ ಥಿಯೇಟರ್ ತುಂಬಬೇಕು, ಹಿಟ್ ಅನ್ನಿಸಿಕೊಳ್ಳಬೇಕೆಂದರೆ, ಸ್ಟೂಡೆಂಟ್ಸ್ ಮತ್ತು ಫ್ಯಾಮಿಲಿ ಆಡಿಯನ್ಸ್ ಬರಲೇಬೇಕು. ಈಗ ಆನೆಬಲ ಸಿನಿಮಾಗೆ ಆ ಯೋಗ ಒದಗಿಬಂದಿದೆ. ಇತ್ತೀಚೆಗೆ ಬಿಡುಗಡೆಯಾಗಿ ಅತ್ಯುತ್ತಮ ಪರತಿಕ್ರಿಯೆ ಪಡೆದ ಕೆಲವೇ ಸಿನಿಮಾಗಳಲ್ಲಿ ಆನೆಬಲ ಕೂಡಾ ಒಂದು. ಬಹುತೇಕ ಹೊಸಬರೇ ಇರುವ ಈ ಸಿನಿಮಾಗೆ ಕ್ರಮೇಣ ವಿದ್ಯಾರ್ಥಿಗಳು ಮತ್ತು ಮಹಿಳಾ ಪ್ರೇಕ್ಷಕರು ಬರಲಾರಂಭಿಸಿದ್ದಾರೆ.

ಅದಕ್ಕೆ ಕಾರಣ ಸ್ವತಃ ಆನೆಬಲ ಚಿತ್ರತಂಡ. ನಾಗಮಂಗಲ ಸೇರಿದಂತೆ ಸುತ್ತಲ ಊರುಗಳಲ್ಲಿನ ಕಾಲೇಜುಗಳಲ್ಲಿ ಖುದ್ದು ಚಿತ್ರತಂಡ ಭೇಟಿ ನೀಡಿ ಸಿನಿಮಾದ ಬಗ್ಗೆ ತಿಳಿಸಿತ್ತು. ಈಸಿನಿಮಾದ ಹಾಡುಗಳು ಅದಾಗಲೇ ಸೂಪರ್ ಹಿಟ್ ಅನ್ನಿಸಿಕೊಂಡಿವೆ. ಎಲ್ಲೆಲ್ಲೂ ಈಗ ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನದ ಹಾಡುಗಳೇ ಮಾರ್ದನಿಸುತ್ತಿವೆ. ಇದರ ಜೊತೆಗೆ ಚಿತ್ರದಲ್ಲಿರುವ ನೈಜ ದೃಶ್ಯಗಳು, ಕಾಮಿಡಿ ಎಲ್ಲರನ್ನೂ ಮೋಡಿ ಮಾಡಿದೆ. ಸ್ವತಃ ಕಾಲೇಜು ವಿದ್ಯಾರ್ಥಿಗಳು ಈ ಸಿನಿಮಾ ಚೆನ್ನಾಗಿದೆ ನೋಡಿ ಅಂತಾ ಹೇಳಿಕೊಳ್ಳುತ್ತಿದ್ದಾರೆ. ಹೀಗೆ ಮೌತ್ ಟಾಕ್ ಕ್ರಿಯೇಟ್ ಆಗುತ್ತಿರುವುದರಿಂದ ದಿನೇ ದಿನೇ ಆನೆಬಲಕ್ಕೆ ಜನಬೆಂಬಲ ದೊರೆಯುತ್ತಿದೆ. ದಿನದಿಂದ ದಿನಕ್ಕೆ ಪ್ರೇಕ್ಷಕರು ಹೆಚ್ಚಾಗುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಆನೆಬಲ ಹಿಟ್ ಸಿನಿಮಾಗಳ ಲಿಸ್ಟಿಗೆ ಸೇರೋದರಲ್ಲಿ ಡೌಟೇ ಇಲ್ಲ.

ಕಲಾ ನಿರ್ದೇಶಕ ಈಶ್ವರಿ ಕುಮಾರ್ ಅವರ ಮಗ ಸಾಗರ್ ಪೂರ್ಣಪ್ರಮಾಣದಲ್ಲಿ ಹೀರೋ ಆಗಿ ನಟಿಸಿರುವ ಚಿತ್ರ ಆನೆಬಲ. ಇವರ ತಂದೆ ಈಶ್ವರಿ ಕುಮಾರ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುತೇಕ ಎಲ್ಲ ಸಿನಿಮಾಗಳಿಗೂ ಕಲಾನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಈಗ ಮಗ ನಟನಾಗಿ ಎಂಟ್ರಿ ಕೊಟ್ಟಿದ್ದಾನೆ. ಅಂದುಕೊಂಡಂತೇ ಆನೆಬಲ ಉತ್ತಮ ಕಲೆಕ್ಷನ್ ಮಾಡಿದರೆ, ಈ ಹೊಸ ಹೀರೋಗೆ ಸಾಕಷ್ಟು ಅವಕಾಶಗಳೂ ಬರಲಿವೆ. ಜನತಾ ಟಾಕೀಸ್ ಲಾಂಛನದಲ್ಲಿ ಎ.ವಿ.ವೇಣುಗೋಪಾಲ್ ಅಡಕಿಮಾರನಹಳ್ಳಿ ಅವರು ನಿರ್ಮಿಸಿರುವ, ಸೂನಗಹಳ್ಳಿ ರಾಜು ನಿರ್ದೇಶಿಸಿರುವ ಆನೆಬಲ ಈ ನೆಲದ ಸೊಗಡಿನ ಸಿನಿಮಾವಾಗಿದ್ದು ಪ್ರತಿಯೊಬ್ಬರೂ ನೋಡಬಹುದಾದ ಕತೆ ಹೊಂದಿದೆ.











































