ಶೋಕ್ದಾರ್ ಧನ್ವೀರ್ ಜೊತೆ ಗರುಡ ಗಾರುಡಿ

Picture of Cinibuzz

Cinibuzz

Bureau Report

ಸಿಂಪಲ್ ಸುನಿ ನಿರ್ದೇಶನದ ಬಜ಼ಾರ್ ಸಿನಿಮಾದ ಮೂಲಕ ಹೀರೋ ಆಗಿ ಎಂಟ್ರಿಕೊಟ್ಟ ಹುಡುಗ ಧನ್ವೀರ್. ಪಾರಿವಾಳವನ್ನು ಪಳಗಿಸುವ ಶೋಕ್ದಾರ್ ಆಗಿ ಎಂಟ್ರಿ ಕೊಟ್ಟಿದ್ದ ಧನ್ವೀರ್ ಅಭಿನಯದ ಎರಡನೇ ಚಿತ್ರ ಬಂಪರ್. ಶೂಟಿಂಗ್ ಹಂತದಲ್ಲಿರುವ ಈ ಚಿತ್ರಕ್ಕೀಗ ಮತ್ತೊಬ್ಬರು ಸೇರ್ಪಡೆಯಾಗಿದ್ದಾರೆ.

ಕೆ.ಜಿ.ಎಫ್. ಸಿನಿಮಾದ ನಂತರ ಖ್ಯಾತಿ ಪಡೆದಿರುವ ನಟ ಗರುಡ ರಾಮ್ ಬಂಪರ್’ನಲ್ಲಿ ವಿಲನ್ ಆಗಿ ಅಬ್ಬರಿಸಲಿದ್ದಾರೆ. ಹೇಳಿ ಕೇಳಿ ಬಂಪರ್ ಪಕ್ಕಾ ಆಕ್ಷನ್, ಮಾಸ್ ಚಿತ್ರ. ಈ ಸಿನಿಮಾದಲ್ಲಿ ರಾಮ್ ಹೇಗೆ ಕಾಣಿಸಿಕೊಳ್ಳಬಹುದು ಎನ್ನುವ ಕುತೂಹಲ ಈಗಲೇ ಕ್ರಿಯೇಟ್ ಆಗಿದೆ. ಬಂಪರ್ ಚಿತ್ರವನ್ನು ಅಲೆಮಾರಿ, ಕಾಲೇಜ್ ಕುಮಾರ, ವಿಕ್ಟರಿ ೨, ಬಿಚ್ಚುಗತ್ತಿ ಮೊದಲಾದ ಸಿನಿಮಾಗಳನ್ನು ನಿರ್ದೇಶಿಸಿ ಹೆಸರು ಮಾಡಿರುವ ಹರಿ ಸಂತೋಷ್ ನಿರ್ದೇಶಿಸುತ್ತಿದ್ದಾರೆ. ಇವತ್ತಿನ ಟ್ರೆಂಡ್’ಗೆ ತಕ್ಕಂತೆ ಸಿನಿಮಾ ರೂಪಿಸುವ ಹೇಗೆ ಅನ್ನೋದನ್ನು ಹರಿ ಸಂತು ಅರಿತಿದ್ದಾರೆ. ಮೊದಲ ಸಿನಿಮಾಗಿಂತಲೂ ಬೇರೆಯದ್ದೇ ರೀತಿಯಲ್ಲಿ ಧನ್ವೀರನ್ನು ತೆರೆ ಮೇಲೆ ತೋರಿಸುವ ಕನಸು ಕಂಡಿದ್ದಾರೆ. ಹೀಗಾಗಿ ತೀರಾ ಹೊಸದೆನ್ನುವ ಕಥೆ ಕೂಡಾ ಬಂಪರ್ ಒಳಗೆ ಅಡಕವಾಗಿದೆ. ಈ ಚಿತ್ರದ ಪಾತ್ರ ಕೂಡಾ ಗರುಡ ರಾಮ್ ಅವರಿಗೆ ಹೇಳಿಮಾಡಿಸಿದಂತೆ ಇದೆಯಂತೆ. ಹೀಗಾಗಿ ರಾಮ್ ಅವರ ಆಯ್ಕೆ ಅಂತಿಮವಾಗಿದೆ.

ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಭರಾಟೆ ಚಿತ್ರದ ನಂತರ ನಿರ್ಮಾಪಕ ಸುಪ್ರೀತ್ ಅವರ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಎರಡನೇ ಚಿತ್ರ ಇದಾಗಿದೆ. ಫ್ಯಾಮಿಲಿ ಎಂಟರ್‌ಟೈನರ್ ಕಥಾನಕ ಒಳಗೊಂಡಿರುವ ಈ ಚಿತ್ರದ ಮುಹೂರ್ತ ಸಮಾರಂಭಕ್ಕೆ ಖುದ್ದು ಛಾಲೆಂಜಿಂಗ್ ಸ್ಟಾರ್ ದರ್ಶನ್ ಆಗಮಿಸಿ ಹರಸಿದ್ದರು. ತೀರಾ ಚಿಕ್ಕ ವಯಸ್ಸಿಗೇ ಹೀರೋ ಅನ್ನಿಸಿಕೊಂಡರೂ ಈಗಾಗಲೇ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿರುವ ಧನ್ವೀರ್ ಕನ್ನಡ ಚಿತ್ರರಂಗದಲ್ಲಿ ಪರ್ಮನೆಂಟು ಸ್ಥಾನ ಗಿಟ್ಟಿಸಿಕೊಳ್ಳುವ ಎಲ್ಲ ಸೂಚನೆಗಳೂ ಇವೆ.

ಕನ್ನಡ ಸಿನಿಮಾರಂಗದಲ್ಲಿ ಸಾಕಷ್ಟು ಸಂಖ್ಯೆಯ ನಟರಿದ್ದರೂ ಮಾಸ್ ಹೀರೋಗಳಾಗಿ ನೆಲೆ ನಿಂತವರು ಕಡಿಮೆ ಜನ. ಧನ್ವೀರ್ ಆ ಕ್ವಾಲಿಟಿಗಳನ್ನು ಹೊಂದಿರುವುದರಿಂದ, ಬಂಪರ್ ಹೇಗೆ ಮೂಡಿಬರಬಹುದು? ಈ ಚಿತ್ರ ಧನ್ವೀರ್ ಜನಪ್ರಿಯತೆಯನ್ನು ಎಷ್ಟರ ಮಟ್ಟಿಗೆ ಹೆಚ್ಚಿಸಬಹುದು ಎನ್ನುವ ಕುತೂಹಲ ಬರೀ ಪ್ರೇಕ್ಷಕ ವಲಯದಲ್ಲಿ ಮಾತ್ರವಲ್ಲದೆ, ಸಿನಿಮಾ ಸರ್ಕಲ್ಲಿನಲ್ಲೂ ಇದೆ. ಈ ಚಿತ್ರದ ಆರಂಭಿಕ ಗೆಲುವು ಎನ್ನುವಂತೆ ಇವತ್ತಿನ ಹುಡುಗರು ಇಷ್ಟಪಡುವಂತಾ ಲುಕ್ಕಿನಲ್ಲಿ ಧನ್ವೀರ್ ಕಾಣಿಸಿಕೊಂಡಿದ್ದಾರೆ ಮತ್ತು ಪೋಸ್ಟರ್’ಗಳು ಕೂಡಾ ಅಷ್ಟೇ ಆಕರ್ಷಕವಾಗಿ ಮೂಡಿಬಂದಿದೆ. ಇವೆಲ್ಲದರ ನಡುವೆ ಈಗ ಗರುಡ ರಾಮ್ ಎಂಟ್ರಿ ಕೊಟ್ಟಿರುವುದು ಬಂಪರ್ ತಂಡಕ್ಕೆ ಮತ್ತಷ್ಟು ಬಲ ತಂದುಕೊಟ್ಟಿದೆ.

ಇನ್ನಷ್ಟು ಓದಿರಿ

Scroll to Top