ತಮಿಳಿನ ಬೋದೈ ಏರಿ ಬುದ್ದಿ ಮಾರಿ, ಇಂದ್ರಜಿತ್ ಸೇರಿದಂತೆ ಮೊದಲಾದ ಸಿನಿಮಾಗಳ ಮೂಲಕ ಹೊಸ ಸದ್ದು ಹೊಮ್ಮಿಸಿರುವ ಸಂಗೀತ ನಿರ್ದೇಶಕ ಕೆ.ಪಿ. ಸದ್ಯ ನೀನಾಸಂ ಸತೀಶ್ ಅಭಿನಯದಲ್ಲಿ ರೂಪುಗೊಳ್ಳುತ್ತಿರುವ ಗೋದ್ರಾ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಲು ಎಂಟ್ರಿ ಕೊಟ್ಟಿದ್ದಾರೆ. ಜ್ಯೂಡಾ ಸ್ಯಾಂಡಿ, ಟೋನಿ ಜೋಸೆಫ್ ಮತ್ತು ನವೀನ್ ಸಜ್ಜು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಪೊಲಿಟಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಗೋದ್ರಾದ ಹಿನ್ನೆಲೆ ಸಂಗೀತ ರಾಮ್ ಗೋಪಾಲ್ ವರ್ಮಾರ ಸರ್ಕಾರ್ ಮಾದರಿಯಲ್ಲಿರಬೇಕು ಅನ್ನೋದು ನಿರ್ದೇಶಕ ಕೆ.ಎಸ್. ನಂದೀಶ್ ಅವರ ಬಯಕೆಯಾಗಿತ್ತಂತೆ. ಹೀಗಾಗಿ ಚಿತ್ರೀಕರಣಗೊಂಡಿರುವ ಸಿನಿಮಾವನ್ನೊಮ್ಮೆ ಕೆ.ಪಿ.ಗೆ ತೋರಿಸಿ ಹಿನ್ನೆಲೆ ಸಂಗೀತ ಮಾಡಲು ಒಪ್ಪಿಸಿದ್ದಾರೆ.
ಸವಾರಿ, ಪೃಥ್ವಿಯಂಥಾ ಸಿನಿಮಾಗಳನ್ನು ನೀಡಿ ಕನ್ನಡ ಚಿತ್ರರಂಗಕ್ಕೆ ಘನತೆ ತಂದುಕೊಟ್ಟ ನಿರ್ದೇಶಕ ಜೇಕಬ್ ವರ್ಗೀಸ್. ಅವರೊಟ್ಟಿಗೆ ಕೆಲಸ ಮಾಡಿ ಅನುಭವ ಹೊಂದಿರುವ ನಂದೀಶ್ ಗೋದ್ರಾವನ್ನು ನಿರ್ದೇಶಿಸುತ್ತಿದ್ದಾರೆ. ಜೇಕಬ್ ಫಿಲಂಸ್ ಮತ್ತು ಲೀಡರ್ ಫಿಲ್ಮ್ ಪ್ರೊಡಕ್ಷನ್ಸ್ ಸೇರಿ ಈ ಚಿತ್ರವನ್ನು ನಿರ್ಮಿಸುತ್ತಿದೆ. ಸತೀಶ್ ಅವರೊಟ್ಟಿಗೆ ಶ್ರದ್ಧಾ ಶ್ರೀನಾಥ್, ಅಚ್ಯುತ್ ಕುಮಾರ್, ವಸಿಷ್ಠ ಸಿಂಹ, ಸೋನು ಗೌಡ, ರಕ್ಷಾ ಸೋಮಶೇಖರ್ ಸೇರಿದಂತೆ ಸಾಕಷ್ಟು ಜನ ಕಲಾವಿದರು ಈ ಚಿತ್ರದಲ್ಲಿದ್ದಾರೆ.
ಈಗಾಗಲೇ ಅನಾವರಣಗೊಂಡಿರುವ ಟೀಸರ್ ಮತ್ತು ಮೋಷನ್ ಪೋಸ್ಟರುಗಳೇ ಗೋದ್ರಾ ಕನ್ನಡದ ಪಾಲಿಗೆ ಗುಣಮಟ್ಟದ ಸಿನಿಮಾವಾಗಲಿದೆ ಅನ್ನೋದನ್ನು ಸಾರಿ ಹೇಳಿವೆ. ಅಭಿನಯ ಚತುರ ನೀನಾಸಂ ಸತೀಶ್ ಕೂಡಾ ಗೋದ್ರಾದ ಬಗ್ಗೆ ಹೆಚ್ಚಿನ ನಿರೀಕ್ಷೆ ಹೊಂದಿದ್ದಾರೆ. ತಮ್ಮ ವೃತ್ತಿ ಬದುಕಿನಲ್ಲಿ ಇದು ಪ್ರಮುಖ ಸಿನಿಮಾ ಆಗಲಿದೆ ಎನ್ನುವ ನಂಬಿಕೆ ಸತೀಶ್ ಅವರದ್ದು. ಈ ಕಾರಣಕ್ಕೇ ಸಾಕಷ್ಟು ಮುತುವರ್ಜಿ ವಹಿಸಿ ಗೋದ್ರಾಗೆ ದುಡಿಯುತ್ತಿದ್ದಾರೆ. ಈಗ ಸಂಗೀತ ನಿರ್ದೇಶಕ ಕೆ.ಪಿ. ಆಗಮನದಿಂದ ಗೋದ್ರಾಗೆ ಮತ್ತಷ್ಟು ಪವರ್ ಬಂದಂತಾಗಿದೆ.
No Comment! Be the first one.