ಕನ್ನಡ ಸಿನಿಮಾದ ಕೈ ಹಿಡಿಯೋಣ…

Picture of Cinibuzz

Cinibuzz

Bureau Report

ಎಲ್ಲೋ ಜನ್ಮತಳೆದ ಕೊರೋನಾ ವೈರಸ್ಸು ಇಲ್ಲೀತನಕ ಬಂದು ಜೀವ ಹಿಂಡುತ್ತಿದೆ. ಇತ್ತ ಕೋಟಿಗಟ್ಟಲೆ ಖರ್ಚು ಮಾಡಿ ಸಿನಿಮಾ ಮಾಡಿದ ನಿರ್ಮಾಪಕರು ತತ್ತರಿಸುತ್ತಿದ್ದಾರೆ. ಈ ವಾರ ಬಹುನಿರೀಕ್ಷಿತ ಚಿತ್ರವಾದ ಶಿವಾರ್ಜುನ ತೆರೆಗೆ ಬರುತ್ತಿದೆ. ಒಂದು ಕಡೆ ಕೊರೋನಾ ಕಾಟಕ್ಕೆ ಹೆದರಿ ಸಾಕಷ್ಟು ಸಿನಿಮಾಗಳು ಬಿಡುಗಡೆಗೆ ಹಿಂದೇಟು ಹಾಕಿದ್ದರೂ, ಶಿವಾರ್ಜುನ ತಂಡ ಮಾತ್ರ ಯಾವುದಕ್ಕೂ ಹೆದರದೆ ನಮ್ಮ ಜನ ಬಂದು ಸಿನಿಮಾ ನೋಡುತ್ತಾರೆ ಎನ್ನುವ ಅದಮ್ಯ ನಂಬಿಕೆಯಲ್ಲಿ ಚಿತ್ರವನ್ನು ತೆರೆಗೆ ತಂದಿದ್ದಾರೆ.

ಚಿರಂಜೀವಿ ಸರ್ಜಾ ನಟನೆಯ ಸಾಕಷ್ಟು ಸಿನಿಮಾಗಳು ಬಂದಿರಬಹುದು. ಆದರೆ, ಶಿವಾರ್ಜುನ ತೀರಾ ಭಿನ್ನವಾಗಿ ಮತ್ತು ಔಟ್ ಅಂಡ್ ಔಟ್ ಕಮರ್ಷಿಯಲ್ಲಾಗಿ ಮೂಡಿಬಂದಿದೆ ಅನ್ನೋದು ಸ್ವತಃ ಚಿರು ಅಭಿಪ್ರಾಯ. ಈ ಚಿತ್ರದ ನಿರ್ಮಾಪಕ ಶಿವಾರ್ಜುನ್ ಬರೋಬ್ಬರಿ ಮೂವತ್ತೈದು ವರ್ಷಗಳಿಂದ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಇಷ್ಟು ವರ್ಷ ಶ್ರಮಿಸಿದ ಜೀವಕ್ಕೆ ಕೈ ಹಿಡಿಯುವ ಸಲುವಾಗಿ ಅವರ ಸುತ್ತಲಿನ ಎಲ್ಲರೂ ಸಹಕರಿಸಿ ಸಿನಿಮಾವೊಂದನ್ನು ನಿರ್ಮಿಸಲು ಸಹಕರಿಸಿದ್ದಾರೆ. ಸಾಕಷ್ಟು ಸಿನಿಮಾಗಳ ಗೆಲುವಿನ ಹಿಂದೆ ಶಿವಾರ್ಜುನ್ ಅವರ ನೆರಳಿದೆ. ಶಿವಾರ್ಜುನ ಸಿನಿಮಾವನ್ನು ನೋಡುವ ಮೂಲಕ ಶಿವಾರ್ಜುನ್ ಅವರ ಕೈ ಹಿಡಿಯಬೇಕಿರುವ ಜರೂರತ್ತಿದೆ.

ನಿಶ್ಚಿತ ಕಂಬೈನ್ಸ್ ಲಾಂಛನದಲ್ಲಿ ಎಂ.ಬಿ.ಮಂಜುಳಾ ಶಿವಾರ್ಜುನ್ ಅವರು ನಿರ್ಮಿಸಿರುವ ಈ ಚಿತ್ರಕ್ಕೆ     ಶಿವತೇಜಸ್ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರಕ್ಕೆ ಹೆಚ್.ಸಿ.ವೇಣು ಅವರ ಛಾಯಾಗ್ರಹಣವಿದೆ.  ಸುರಾಗ್ ಸಂಗೀತ ನಿರ್ದೇಶನ, ಸಾಧುಕೋಕಿಲ ಹಿನ್ನೆಲೆ ಸಂಗೀತ,  ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ, ವಿನೋದ್, ಥ್ರಿಲ್ಲರ್ ಮಂಜು  ಅವರ ಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.  ಯೋಗರಾಜ್ ಭಟ್, ಡಾ. ವಿ.ನಾಗೇಂದ್ರಪ್ರಸಾದ್ ಹಾಗೂ ಕವಿರಾಜ್ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ.

   ಚಿರಂಜೀವಿ ಸರ್ಜಾ, ಅಮೃತ ಐಯ್ಯಂಗಾರ್, ಅಕ್ಷತ ಶ್ರೀನಿವಾಸ್, ಕಿಶೋರ್, ತಾರಾ, ಅವಿನಾಶ್, ಕುರಿ ಪ್ರತಾಪ್, ದಿನೇಶ್ ಮಂಗಳೂರು, ಸಾಧುಕೋಕಿಲ, ರವಿ ಕಿಶನ್, ತರಂಗ ವಿಶ್ವ, ಕೆ.ಆರ್.ಪೇಟೆ ಶಿವರಾಜ್, ನಯನ ಮುಂತಾದವರಿದ್ದಾರೆ.

ಇನ್ನಷ್ಟು ಓದಿರಿ

Scroll to Top