ಕೊರೋನ ಪೀಡಿತರಿಗೆ 10 ಲಕ್ಷ ಕೊಟ್ಟರು ವೀಪಿ!

Picture of Cinibuzz

Cinibuzz

Bureau Report

ಕೊರೋನದಿಂದ ಕಂಗಾಲಾಗಿರುವವರ ಸಮಸ್ಯೆಗಳಿಗೆ ಸ್ಪಂದಿಸಿರುವ ಗಾಯಕ ವಿಜಯ ಪ್ರಕಾಶ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ೧೦ ಲಕ್ಷ ನೀಡಿದ್ದಾರೆ. ಈ ಕುರಿತು ಸ್ವತಃ ವಿಜಯ್ ಪ್ರಕಾಶ್ ಹೀಗೆ ಹೇಳಿದ್ದಾರೆ.

ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೋ ಅಂತ ಪುರಂದರ ದಾಸರು ಹೇಳಿರುವಂತ ಮಾತು, ನನ್ನ ಜೀವನದಲ್ಲಿ ಸಮಸ್ತ ಕನ್ನಡ ಜನತೆ ಆ ಪ್ರೀತಿಯ ಬೊಗಸೆಯನ್ನ ತುಂಬಿಸಿ ಕೊಟ್ಟಿದ್ದಾರೆ. ಆ ಬೊಗಸೆಯಿಂದ  ಒಂದು ಚಿಕ್ಕ ಕಾಣಿಕೆ ಜನರಿಗಾಗಿ ಮಾಡೋದು ನನ್ನ ಸೌಭಾಗ್ಯ, ನನ್ನ ಕರ್ತವ್ಯ, ಇದು ಭಗವಂತನ ಕೃಪೆ ಎಂದು ಭಾವಿಸುತ್ತೇನೆ.

ಕರೋನಾ ಮಹಾಮಾರಿಯನ್ನ ನಾವೆಲ್ಲರೂ ಮನೆಯೊಳಗಿದ್ದು ಎದುರಿಸುತ್ತಿದ್ದರೆ, ಹೊರಗಡೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳು, ನಮ್ಮ ಸರ್ಕಾರದ ಎಲ್ಲ ಅಧಿಕಾರಿಗಳು, ಡಾಕ್ಟರ್ಸ್ ಹಾಗೂ ಅವರ ತಂಡ, ಪೊಲೀಸರು  ಹೀಗೆ ಹಗಲು ರಾತ್ರಿ ನಮ್ಮನ್ನ  ಈ ಒಂದು ಮಹಾಮಾರಿಯಿಂದ ರಕ್ಷಿಸಲು ಕೆಲಸ ಮಾಡ್ತಾ ಇದ್ದಾರೆ. ಇಂಥ ಒಂದು ಸಂದರ್ಭದಲ್ಲಿ ನಾವೆಲ್ಲರೂ ನಮ್ಮ ಕೈಯಲ್ಲಿ ಆದಷ್ಟು ಪರಿಹಾರ ನಿಧಿಗೆ ಕೊಟ್ಟರೆ ಅದು ಎಲ್ಲಿಯೋ ಯಾರೋ ಒಬ್ಬರ ಪ್ರಾಣವನ್ನ ಉಳಿಸಲು ಅನುಕೂಲವಾಗಬಹುದು ಎಂದು ಭಾವಿಸುತ್ತೇನೆ.  ಹಾಗಾಗಿ ಸಮಸ್ತ ಜನತೆಯಲ್ಲಿ ನನ್ನ ಪ್ರಾರ್ಥನೆ, ನಿಮ್ಮ ಕೈಯಲ್ಲಿ ಆದಷ್ಟು ಕೊಡುಗೆಯನ್ನ ಈ ಪರಿಹಾರ ನಿಧಿಗೆ ಮಾಡಿ. ನಿಮ್ಮಿಂದ ಯಾರೋ ಒಬ್ಬರ ಜೀವ ಉಳಿಯಲಿಕ್ಕೆ ಸಾಧ್ಯವಾಗುತ್ತೆ.

ಇಷ್ಟೇ ಅಲ್ಲದೆ ನಾನು ನಮ್ಮ ದೇಶದ ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ, ಕೆಲವು ರಾಜ್ಯಗಳ ಪರಿಹಾರ ನಿಧಿಗೆ ಕೂಡ ಒಂದು ಅಳಿಲು ದೇಣಿಗೆಯನ್ನ ನೀಡಿದ್ದೇನೆ.  ಇಂಥ ಸಮಯದಲ್ಲಿ ನಾವೆಲ್ಲರೂ ಕೈಜೋಡಿಸಿ ನಿಂತರೆ, ಖಂಡಿತವಾಗಿಯೂ ಈ ಕರೋನಾ ಅನ್ನುವ ಮಹಾಮಾರಿಯನ್ನ ಗೆದ್ದು ಮೊದಲಿನಂತೆಯೇ ಸಮಾಜದಲ್ಲಿ ಸುಖವಾಗಿ, ಸಂತೋಷವಾಗಿ ಬದುಕುತ್ತೇವೆ ಅನ್ನುವ ಭರವಸೆ ನನಗಿದೆ. “ಲೋಕಾ ಸಮಸ್ತಾ  ಸುಖಿನೋ ಭವಂತು”

 

 

ಇನ್ನಷ್ಟು ಓದಿರಿ

Scroll to Top